ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಬಿಎಸ್ಪಿ ಮುಖಂಡನ ಪುತ್ರ
ಲಕ್ನೊ, ಮಾ.15: ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಹಿರಿಯ ಮುಖಂಡ ಲಾಲ್ಜಿ ವರ್ಮರ ಪುತ್ರ ಬುಧವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ವರ್ಮ(39 ವರ್ಷ) ಮನೆಯ ಕೋಣೆಯಲ್ಲಿ ರಿವಾಲ್ವರ್ನಿಂದ ಎದೆಗೆ ಗುಂಡು ಹಾರಿಸಿಕೊಂಡರು. ಗುಂಡಿನ ಸದ್ದು ಕೇಳಿದ ತಕ್ಷಣ ಅವರ ಪತ್ನಿ ಮಾಧುರಿ ವರ್ಮ ಧಾವಿಸಿದಾಗ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ವಿಭೂತಿಖಂಡ್ ಪೊಲೀಸ್ ಠಾಣೆಯ ಎಸ್ಐ ಸತ್ಯೇಂದ್ರ ರಾಯ್ ತಿಳಿಸಿದ್ದಾರೆ. ವಿಕಾಸ್ ವರ್ಮ ಕಳೆದ ಕೆಲವು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣ ನೊಂದಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಕಾಸ್ಗೆ ಇಬ್ಬರು ಪುತ್ರರಿದ್ದಾರೆ.
ಕಳೆದ ವರ್ಷದ ಮಾರ್ಚ್ 12ರಂದೂ ವಿಕಾಸ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದರೂ ಗಂಭೀರ ಗಾಯಗಳೊಂದಿಗೆ ಅವರನ್ನು ರಕ್ಷಿಸಲಾಗಿತ್ತು. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ಫೇಸ್ಬುಕ್ನಲ್ಲಿ ತನ್ನ ಮಿತ್ರರಿಗೆ ಸಂದೇಶವೊಂದನ್ನು ಪೋಸ್ಟ್ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.