ಗೌರಿ ಲಂಕೇಶ್ ಹತ್ಯೆ ಪ್ರಕರಣ: 2ನೇ ಆರೋಪಿಯನ್ನು ಗುರುತಿಸಿದ ಎಸ್ಐಟಿ
ಈತನಿಗೂ ಸನಾತನ ಸಂಸ್ಥಾಗೂ ಇರುವ ಸಂಬಂಧವೇನು?
ಬೆಂಗಳೂರು, ಮಾ.16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಎರಡನೇ ಶಂಕಿತ ಆರೋಪಿಯನ್ನು ಎಸ್ ಐಟಿ ಗುರುತಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ 34 ವರ್ಷದ ಪ್ರವೀಣ್ ಲಿಮ್ಕರ್ ಎಂಬಾತ ಪ್ರಕರಣದ 2ನೆ ಆರೋಪಿಯಾಗಿದ್ದು, ಈತ ಸನಾತನ ಸಂಸ್ಥಾದ ಕಾರ್ಯಕರ್ತನೆಂದು ತಿಳಿಯಲಾಗಿದೆ ಎಂದು indianexpress.com ವರದಿ ಮಾಡಿದೆ.
ಈತ ಈಗಾಗಲೇ ತಲೆಮರೆಸಿಕೊಂಡಿದ್ದು, ಒಂಬತ್ತು ವರ್ಷಗಳ ಹಿಂದೆ ನಡೆದ ಗೋವಾದ ಮಡಗಾಂವ್ ಸ್ಫೋಟ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಏಜನ್ಸಿಯ ಸೂಚನೆಯಂತೆ ಇಂಟರ್ ಪೋಲ್ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸನ್ನು ಜಾರಿಗೊಳಿಸಿತ್ತು ಎನ್ನಲಾಗಿದೆ.
ಅಕ್ಟೋಬರ್ 19, 2009ರಲ್ಲಿ ನಡೆದ ಈ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಲಿಮ್ಕರ್ ಮತ್ತು ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆಂದು ಈ ಹಿಂದೆಯೇ ಘೋಷಿಸಲಾಗಿತ್ತು. ದೀಪಾವಳಿ ಕಾರ್ಯಕ್ರಮ ನಡೆಯುವ ಸ್ಥಳವೊಂದರಲ್ಲಿ ಬಾಂಬ್ ಒಂದನ್ನು ಇಡಲು ಸಾಗಿಸುತ್ತಿದ್ದ ವೇಳೆ ನಡೆದ ಸ್ಫೋಟದಲ್ಲಿ ಇಬ್ಬರು ಸನಾತನ ಸಂಸ್ಥಾ ಕಾರ್ಯಕರ್ತರು ಸಾವಿಗೀಡಾಗಿದ್ದರು. ಲಿಮ್ಕರ್ ಜತೆ ನಾಪತ್ತೆಯಾದವರನ್ನು ಮಂಗಳೂರಿನ ಜಯಪ್ರಕಾಶ್ ಆಲಿಯಾಸ್ ಅಣ್ಣ(45), ಪುಣೆಯ ಸಾರಂಗ್ ಅಕೋಲ್ಕರ್ (38)., ಸಾಂಗ್ಲಿಯ ರುದ್ರಾ ಪಾಟೀಲ್ (37) ಎಂದು ಗುರುತಿಸಲಾಗಿತ್ತು.
ಕರ್ನಾಟಕ ಪೊಲೀಸರು ಗೌರಿ ಲಂಕೇಶ್ ಹತ್ಯೆ ಸಂಬಂಧ ಕೆ.ಟಿ. ನವೀನ್ ಕುಮಾರ್ ನನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಪ್ರವೀಣ್ ಲಿಮ್ಕರ್ ನನ್ನು ಎರಡನೇ ಆರೋಪಿಯೆಂದು ಗುರುತಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಗೌರಿ ಲಂಕೇಶ್ ಅವರ ಮನೆಯ ಸುತ್ತಲಿನ ಪರಿಸರವನ್ನು ಗಮನಿಸುವ ಕಾರ್ಯದಲ್ಲಿ ಪ್ರವೀಣ್ ತನ್ನ ಜತೆಗೆ ಕೆಲಸ ಮಾಡಿದ್ದನೆಂದು ನವೀನ್ ವಿಚಾರಣೆ ವೇಳೆ ತಿಳಿಸಿದ್ದಾನೆನ್ನಲಾಗಿದೆ. ಸದ್ಯ ತನಿಖಾ ಏಜೆನ್ಸಿಯ ಬಳಿಯಿರುವ ಪ್ರವೀಣ್ ಲಿಮ್ಕರ್ ಫೋಟೋಗಳು ಬಹಳ ಹಳೆಯದಾಗಿದ್ದು, ಗುರುತಿಸಲಾಗಿರುವ ಆರೋಪಿ ಅದೇ ವ್ಯಕ್ತಿ ಎನ್ನುವುದು ಗ್ಯಾರಂಟಿಯಿಲ್ಲ ಎನ್ನುತ್ತವೆ ಮೂಲಗಳು.
ಲಿಮ್ಕರ್ ವೃತ್ತಿಯಲ್ಲಿ ಒಬ್ಬ ಪತ್ರಕರ್ತನೆಂದು ತಿಳಿಯಲಾಗಿದ್ದು, ಆತ ಸನಾತನ ಸಂಸ್ಥಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ತನ್ನ ನಾಪತ್ತೆಯಾಗಿರುವ ಸದಸ್ಯರಿಗೆ ತನ್ನನ್ನು ಹೊಣೆಯಾಗಿಸಲು ಸಾಧ್ಯವಿಲ್ಲ ಎಂದು ಸನಾತನ ಸಂಸ್ಥಾ ಕೆಲ ಸಮಯದ ಹಿಂದೆ ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.