ಬಾಳೆಹೊನ್ನೂರು: ಮನೆಗೆ ಬಡಿದ ಸಿಡಿಲು; ಗೃಹೋಪಯೋಗಿ ಸಾಮಗ್ರಿಗಳಿಗೆ ಹಾನಿ
![ಬಾಳೆಹೊನ್ನೂರು: ಮನೆಗೆ ಬಡಿದ ಸಿಡಿಲು; ಗೃಹೋಪಯೋಗಿ ಸಾಮಗ್ರಿಗಳಿಗೆ ಹಾನಿ ಬಾಳೆಹೊನ್ನೂರು: ಮನೆಗೆ ಬಡಿದ ಸಿಡಿಲು; ಗೃಹೋಪಯೋಗಿ ಸಾಮಗ್ರಿಗಳಿಗೆ ಹಾನಿ](https://www.varthabharati.in/sites/default/files/images/articles/2018/03/16/bale.gif)
ಚಿಕ್ಕಮಗಳೂರು, ಮಾ.16: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಹಲವು ಗೃಹಪಯೋಗಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಎನ್.ಆರ್ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಸಮೀಪದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬುಧವಾರ ಹಾಗೂ ಗುರುವಾರ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಬಾಳೆಹೊನ್ನೂರು ಸುತ್ತಮುತ್ತ ಗುರುವಾರ ಸಂಜೆ ಆರಂಭಗೊಂಡ ಗುಡುಗು, ಸಿಡಿಲು ಸಹಿತ ಮಳೆ ರಾತ್ರಿಯವರೆಗೂ ಮುಂದುವರಿದಿತ್ತು. ಈ ವೇಳೆ ಬಾಳೆಹೊನ್ನೂರು ಸಮೀಪದಲ್ಲಿ ಎನ್.ಆರ್.ಪುರ ರಸ್ತೆಯಲ್ಲಿರುವ ಅವಿನಾಶ್ ಎಂಬವರ ಮನೆಗೆ ಸಿಡಿಲು ಬಡಿದಿದೆ. ಈ ವೇಳೆ ಮನೆಯಲ್ಲಿದ್ದ ಟಿ.ವಿ.ಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಸ್ಫೋಟದಿಂದ ಇಡೀ ಮನೆ ಆವರಿಸಿದ ಬೆಂಕಿಗೆ ಸಿಲುಕಿ ಕೋಣೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸುಟು ್ಟಕರಕಲಾಗಿವೆ. ಅದೃಷ್ಟವಶಾತ್ ಮನೆ ಮಂದಿಗೆ ಯಾವುದೇ ತೊಂದರೆಯಾಗಿಲ್ಲ. ಬೆಂಕಿ ಅನಾಹುತದಿಂದ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.