ಹನೂರು: ಬಾಬು ಜಗಜೀವನರಾಮ್ ಸಮುದಾಯ ಭವನ ಲೋಕಾರ್ಪಣೆ
![ಹನೂರು: ಬಾಬು ಜಗಜೀವನರಾಮ್ ಸಮುದಾಯ ಭವನ ಲೋಕಾರ್ಪಣೆ ಹನೂರು: ಬಾಬು ಜಗಜೀವನರಾಮ್ ಸಮುದಾಯ ಭವನ ಲೋಕಾರ್ಪಣೆ](/images/placeholder.jpg)
ಹನೂರು,ಮಾ.16: ಸಿದ್ದರಾಮಯ್ಯನವರ ಸರ್ಕಾರ ಬಡವರಿಗೆ ಆಧಾರಿತ ಸರ್ಕಾರವಾದುದರಿಂದ ರಾಜ್ಯದಲ್ಲಿ ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದೆ ಎಂದು ಶಾಸಕ ಆರ್ ನರೇಂದ್ರರಾಜೂಗೌಡ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಹೂಗ್ಯಂ, ನಾಗಣ್ಣನಗರ, ಕಾಮಗೆರೆ ಗ್ರಾಮಗಳಲ್ಲಿ ತಲಾ 10 ಲಕ್ಷ ವೆಚ್ಚದ ಬಾಬು ಜಗಜೀವರಾಮ್ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಸ್ಇಪಿ, ಟಿಎಸ್ಪಿ ಯೋಜನೆಯಡಿ ಇಡೀ ರಾಜ್ಯದಲ್ಲಿಯೇ ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆತಿದೆ. ಇದರಿಂದ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಹನೂರು ಕ್ಷೇತ್ರದ ವಿವಿಧ ಸಮುದಾಯಕ್ಕೆ ಸರ್ಕಾರದಿಂದ 144ಕ್ಕೂ ಹೆಚ್ಚು ಸಮುದಾಯ ಭವನಗಳು ನಿರ್ಮಾಣ ಮಾಡಲಾಗಿದ್ದು, ಅದರಲ್ಲೂ ವಿಶೇಷವಾಗಿ 37 ಬಾಬು ಜಗಜೀವರಾಮ್ ಸಮುದಾಯ ಭವನ ಆಗಿವೆ. ಕ್ರೈಸ್ತ ಸಮುದಾಯಕ್ಕೆ 2.75 ಲಕ್ಷ ಬಂದಿದ್ದು, ಮತ್ತೆ 2 ಕೋಟಿ ಅನುದಾನ ಬಂದಿದೆ. ಪ್ರತಿಯೊಂದು ಸಮುದಾಯಕ್ಕೂ ಇಷ್ಟೊಂದು ಅನುದಾನ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಲ್ಲಾ ಸಮುದಾಯದ ಸರ್ವತೋಮುಖ ಅಭಿವೃದ್ದಿ ಮಾಡಬೇಕೆಂಬ ಕಾಳಜಿಯೇ ಕಾರಣ ಎಂದರು.
ಬಿಜೆಪಿ ಸರ್ಕಾರ ಕೇವಲ ಭಾಷಣಕಷ್ಟೇ ಸಿಮೀತ: ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಬಡವರ ಪರ ಶಾಶ್ವತ ಕೆಲಸಗಳನ್ನು ಮಾಡದೇ ಕೇವಲ ಭಾಷಣಕ್ಕಷ್ಟೇ ಸಿಮೀತವಾಗಿದ್ದು, ರಾಜ್ಯದಲ್ಲಿಯೂ ಸಹ ಬಿಜೆಪಿ ಪಕ್ಷ ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಆ ಸಮಯದಲ್ಲಿ ಒಂದೇ ಒಂದು ಸಮುದಾಯವನ್ನು ಹನೂರು ಕ್ಷೇತ್ರದಲ್ಲಿ ಮಾಡವುದಕ್ಕೆ ಆಗಿರಲಿಲ್ಲ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಬಸವರಾಜು, ತಾಪಂ ಅದ್ಯಕ್ಷ ರಾಜು, ಸದಸ್ಯೆ ಸುಮತಿ, ಗ್ರಾಪಂ ಅದ್ಯಕ್ಷೆ ರಾಜೇಶ್ವರಿ, ಉಪಾದ್ಯಕ್ಷ ಚಿತ್ರ, ಮುಖಂಡರಾದ ಅಂಕಶೆಟ್ಟಿ, ಗಣೇಶ್, ಬಸವೇಗೌಡ, ರಂಗಯ್ಯ, ಸಮಾಜ ಕಲ್ಯಾಣ ಅಧಿಕಾರಿ ಮಂಜುಳಾ, ನಿರ್ಮೀತಿ ಕೇಂದ್ರ ಎಇ ಪ್ರತಾಪ್, ಗುತ್ತಿಗೆದಾರ ಮಹೇಶ್ ಇನ್ನಿತರರು ಹಾಜರಿದ್ದರು.