ವಚನ ಧರ್ಮದಲ್ಲಿ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ: ಎನ್.ನಾಗಪ್ಪ
![ವಚನ ಧರ್ಮದಲ್ಲಿ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ: ಎನ್.ನಾಗಪ್ಪ ವಚನ ಧರ್ಮದಲ್ಲಿ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ: ಎನ್.ನಾಗಪ್ಪ](https://www.varthabharati.in/sites/default/files/images/articles/2018/03/16/IMG_0403.jpg)
ತುಮಕೂರು, ಮಾ.16: ಜೀವನೋಪಾಯಕ್ಕಾಗಿ ಕೈಗೊಂಡ ಕಾಯಕ ಗೌರವಯುತವಾದದ್ದು ಎಂದು ವಚನ ಧರ್ಮ ಹೇಳುತ್ತದೆ. ಆ ಕಾರಣಕ್ಕಾಗಿ ವಚನಕಾರರು ಕಾಯಕದ ಬಗ್ಗೆ ಅತ್ಯಂತ ಪ್ರೀತಿ-ಗೌರವ ಹೊಂದಿದ್ದರು ಎಂದು ಸಾಹಿತಿ ಹಾಗೂ ವಾಸವಿ ವಿದ್ಯಾಪೀಠದ ಆಡಳಿತಾಧಿಕಾರಿ ಎನ್.ನಾಗಪ್ಪ ತಿಳಿಸಿದ್ದಾರೆ.
ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ ಕಾರ್ಯಕ್ರಮದಲ್ಲಿ ವಚನಕಾರರಲ್ಲಿ ಕಾಯಕ ನಿಷ್ಠೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, 12ನೇ ಶತಮಾನದಲ್ಲಿ ವಚನಕಾರರಿಗೆ ಮೊದಲು ಬದುಕು ಮುಖ್ಯವಾಗಿ, ಆ ಬದುಕಿಗಾಗಿ ಒಂದು ಕಾಯಕ ಮಾಡುತ್ತಾ, ಅದರ ಅನುಭವದ ನೆಲೆಯಲ್ಲಿ ಮಾತನಾಡುತ್ತಾ ಹೋದರು. ಈ ಮಾತು ವಚನಗಳಾಗಿ ಕಾಯಕವನ್ನು ವಚನಕಾರರು ವೃತ್ತಿಧರ್ಮವನ್ನಾಗಿ ಮಾಡಿಕೊಂಡರು ಎಂದು ಹೇಳಿದರು.
ಫ.ಗು.ಹಳಕಟ್ಟಿ ಅವರು ವಚನಗಳನ್ನು ಶಾಸ್ತ್ರಸಾರ ಎಂದರೆ ಎಂ.ಆರ್.ಶ್ರೀನಿವಾಸಮೂತಿ ಅವರು ವಚನಗಳನ್ನು ಧರ್ಮಸಾರ ಎಂದು 1946ಕ್ಕಿಂತ ಹಿಂದೆ ಕರೆದರು. ಆದರೆ ಡಾ. ಎಂ.ಎಂ.ಕಲಬುರ್ಗಿ ಅವರು ವಚನಗಳು ಆಚಾರ್ಯರ ಸಾಹಿತ್ಯವಲ್ಲ. ಅವು ಅನುಭವಿಗಳ ಸಾಹಿತ್ಯ ಎಂದು ಹೇಳುತ್ತಾ ಜನರಿಂದ ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ ಎಂದು ತಿಳಿಸಿದರು.
ವಚನಕಾರರು ಮನುಷ್ಯ ಪ್ರೀತಿಯನ್ನು ಇಟ್ಟುಕೊಂಡಿದ್ದರು. ವಚನ ಸಾಹಿತ್ಯ ಕೇವಲ ಒಂದು ಸಾಹಿತ್ಯಕ ದಾಖಲೆಯಾಗಿ ಉಳಿಯದೆ, ಅದೊಂದು ಸಾಹಿತ್ಯ ಮತ್ತ ಸಾಂಸ್ಕೃತಿಕ ಚಳವಳಿಯಾಗಿ ಬಂತು. ಕಾಯಕನಿಷ್ಠ ವಚನಕಾರರುಗಳಲ್ಲಿ ಭೇದ-ಭಾವ ಇರಲಿಲ್ಲ. ಮೇಲು ಕೀಳೆಂಬುದು ಇರಲಿಲ್ಲ. ಜಾತಿ ಎಂಬ ಅರಿವೆ ಇಲ್ಲದವರಾಗಿದ್ದರು. ಕಾಯಕವನ್ನೇ ರೂಪಕವನ್ನಾಗಿ ಮಾಡಿಕೊಂಡವರು ವಚನಕಾರರು. ಅವರಲ್ಲಿ ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ, ಅಂಬಿಗರ ಚೌಡಯ್ಯ, ತುರುಗಾಹಿ ರಾಮಣ್ಣ, ಮಡಿವಾಳ ಮಾಚಿದೇವ, ಮಾದಾರ ಚನ್ನಯ್ಯ, ಉರಿಲಿಂಗ ಪೆದ್ದಿ, ಸೂಳೆ ಸಂಕವ್ವ ಹೀಗೆ ಕೆಲವರ ವಚನಗಳಲ್ಲಿದ್ದ ಕಾಯಕತ್ವವನ್ನು ವಿವರಿಸಿದರು.
ತುರುಗಾಹಿ ರಾಮಣ್ಣ ಮತ್ತು ಮಡಿವಾಳ ಮಾಚಿದೇವರು ಶರಣರಲ್ಲದವರ ಗೋವು ಕಾಯುವುದಿಲ್ಲ. ಶರಣರಲ್ಲದವರ ಬಟ್ಟೆ ಒಗೆಯುವುದಿಲ್ಲ ಎಂದು ಹೇಳಿದ್ದಾರೆ. ಇವರಿಬ್ಬರ ನಿಲುವು ಅಂದರೆ ಶರಣರೆಂದರೆ ಶಿವಮೂರ್ತಿ ಶಾಸ್ತ್ರಿಗಳು ಹೇಳುವಂತೆ ಸುಜನರೇ ಅಂದರೆ ಒಳ್ಳೆಯ ಜನರೆಲ್ಲ ಶರಣರೆಂದು ಅರ್ಥ. ವಚನಕಾರರು ದೇವಾಲಯವನ್ನು ದೇಹದೊಳಗೆ ಕಂಡರು. ದೇಹದ ವಿವಿಧ ಭಾಗಗಳನ್ನು ದೇವಾಲಯಕ್ಕೆ ಹೋಲಿಸಿದರು. ಕಾಶಿ ಯಾತ್ರೆ ಕೈಗೊಳ್ಳುವುದನ್ನು ಖಂಡಿಸಿದರು. ಬಸವಣ್ಣ ಆದಿಯಾಗಿ ಎಲ್ಲಾ ಶರಣರು ಜಾತಿ, ಮತ ತೊರೆದು ಸಮನ್ವಯದಿಂದ ಬದುಕಿದರು. ಸಹಪಂಕ್ತಿ ಭೋಜನ ಮಾಡಿದರು. ಕಾಯಕದ ಮಹತ್ವವನ್ನು ಸಾರಿದರು. ಸಮಾನತೆಯನ್ನು ಅನುಸರಿಸಿ ತೋರಿಸಿದರು. ಅಂತರ್ಜಾತಿ ವಿವಾಹಕ್ಕೆ ನಾಂದಿಹಾಡಿದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಚಂದ್ರಶೇಖರ್ ಮಾತನಾಡಿ, ವಚನಕಾರರ ಕೊಡುಗೆ ಅಪರೂಪದ್ದು, ಸಮಾಜದ ಬದಲಾವಣೆಯಲ್ಲಿ ಅದ್ಭುತವಾದ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ವಚನಕಾರರು ವಚನಗಳ ಬಗ್ಗೆ ಇನ್ನೂ ಗಂಭೀರ ಚರ್ಚೆ ನಡೆಯಬೇಕು ಎಂದರು.
ಜ್ಞಾನಬುತ್ತಿಯ ಪಿ.ಶಾಂತಿಲಾಲ್, ಅಕ್ಕಮ್ಮ, ಡಾ.ವೆಂಕಟರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.