ಆನ್ಲೈನ್ ಖರೀದಿ ಬಗ್ಗೆ ಎಚ್ಚರಿಕೆ ಅಗತ್ಯ: ಶಾಸಕ ರಫೀಕ್ ಅಹಮದ್
![ಆನ್ಲೈನ್ ಖರೀದಿ ಬಗ್ಗೆ ಎಚ್ಚರಿಕೆ ಅಗತ್ಯ: ಶಾಸಕ ರಫೀಕ್ ಅಹಮದ್ ಆನ್ಲೈನ್ ಖರೀದಿ ಬಗ್ಗೆ ಎಚ್ಚರಿಕೆ ಅಗತ್ಯ: ಶಾಸಕ ರಫೀಕ್ ಅಹಮದ್](/images/placeholder.jpg)
ತುಮಕೂರು,ಮಾ.16: ಡಿಜಿಟಲ್ ಮಾರುಕಟ್ಟೆ ವಿಸ್ತೀರ್ಣಗೊಂಡಿದ್ದು, ಆನ್ಲೈನ್ ಮೂಲಕ ವಸ್ತುಗಳನ್ನು ಖರೀದಿಸುವ ಗ್ರಾಹಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ ಎಂದು ಶಾಸಕ ಡಾ.ರಫೀಕ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ವಿಶ್ವ ಗ್ರಾಹಕರ ದಿನಾಚರಣೆ'ಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ತಂತ್ರಜ್ಞಾನಗಳು ಹೆಚ್ಚಾದಂತೆ ಗ್ರಾಹಕರನ್ನು ಗೌರವದಿಂದ ಕಾಣುವ ಸಂಸ್ಕೃತಿ ಕಣ್ಮರೆಯಾಗಿದೆ. ಕಾಲಕಾಲಕ್ಕೆ ಬದಲಾಗುವ ಗ್ರಾಹಕರ ನಿಯಮಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಇರಬೇಕು. ಎಲ್ಲ ಕಾಲದಲ್ಲಿಯೂ ಗ್ರಾಹಕರಿಗೆ ಮೋಸವಾಗುತ್ತಲೇ ಇದೆ ಎಂದರು.
ತೂಕದ ಉಪಕರಣಗಳು ಎಷ್ಟೇ ಬದಲಾವಣೆಯಾದರು ಅವುಗಳನ್ನು ತಯಾರಿಸುವುದು ಮನುಷ್ಯರೇ. ಹಾಗಾಗಿ ದೋಷಗಳು ಸಾಮಾನ್ಯ ಅಧಿಕಾರಿಗಳು ನಿಯಮಿತವಾಗಿ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸುವ ಮೂಲಕ ನ್ಯಾಯೋಚಿತ ವ್ಯಾಪಾರದ ಮೂಲಕ ಗ್ರಾಹಕರಿಗೆ ನ್ಯಾಯವನ್ನು ಒದಗಿಸುತ್ತಿದ್ದಾರೆ. ಆನ್ಲೈನ್ ಮಾರುಕಟ್ಟೆ ಯಶಸ್ವಿಯಾಗಿದ್ದು, ಗ್ರಾಹಕರು ಸ್ಥಳದಲ್ಲಿಯೇ ಕುಳಿತು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಉಳಿತಾಯಕ್ಕಾಗಿ ಆನ್ಲೈನ್ ಖರೀದಿ ಕಡೆ ಮಾರು ಹೋಗಿ, ಮೋಸಕ್ಕೆ ಒಳಗಾಗುತ್ತಿದ್ದಾರೆ. ಗ್ರಾಹಕರು ಆನ್ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಆರ್.ಕೆ.ಪ್ರತಿಭ ಮಾತನಾಡಿ, ಗ್ರಾಹಕರು ಆನ್ಲೈನ್ ಮಾರುಕಟ್ಟೆಯಿಂದ ಹೆಚ್ಚಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ಆನ್ಲೈನ್ ಮೂಲಕ ಖರೀದಿಸುವಾಗ ಗ್ರಾಹಕರು ಕಂಪನಿಗಳ ವಿಳಾಸವನ್ನು ಗಮದಲ್ಲಿಟ್ಟುಕೊಳ್ಳಬೇಕು. ವಿಳಾಸವೇ ಇಲ್ಲದ ಕಂಪನಿಗಳ ವಸ್ತುಗಳನ್ನು ಖರೀದಿಸಿ ಮೋಸಕ್ಕೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆನ್ಲೈನ್ ಮಾರುಕಟ್ಟೆ ವಿಸ್ತೀರ್ಣಗೊಳ್ಳುತ್ತಿರುವುದರೊಂದಿಗೆ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕಾನೂನಿನಲ್ಲಿಯೂ ಬದಲಾವಣೆ ಆಗಬೇಕಿದೆ. ವಿದ್ಯಾರ್ಥಿಗಳೇ ಹೆಚ್ಚಾಗಿ ಆನ್ಲೈನ್ ಮಾರುಕಟ್ಟೆ ಗ್ರಾಹಕರಾಗಿದ್ದು, ಆನ್ಲೈನ್ನಲ್ಲಿ ವ್ಯವಹರಿಸ ಬೇಕಾದರೆ ಎಚ್ಚರಿಕೆ ವಹಿಸದೇ ಹೋದರೆ ಮೋಸ ಹೋಗಬೇಕಾಗುತ್ತದೆ. ಗ್ರಾಹಕರು ತಮ್ಮ ಹಕ್ಕು ಚಲಾಯಿಸುವ ಮೂಲಕ ಹಕ್ಕನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, ಸಿದ್ದಗಂಗಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಿ.ಎನ್.ಯೋಗೀಶ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಸಿ.ಜಯಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.