ಕಾಂಗ್ರೆಸ್ ನವರು ಟಿಕೆಟ್ ಮಾರಾಟ ಮಾಡಲು ಮುಂದಾಗಿರುವುದು ದುರ್ದೈವ: ಮಾಜಿ ಸಂಸದ ಎಚ್.ವಿಶ್ವನಾಥ್
![ಕಾಂಗ್ರೆಸ್ ನವರು ಟಿಕೆಟ್ ಮಾರಾಟ ಮಾಡಲು ಮುಂದಾಗಿರುವುದು ದುರ್ದೈವ: ಮಾಜಿ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ನವರು ಟಿಕೆಟ್ ಮಾರಾಟ ಮಾಡಲು ಮುಂದಾಗಿರುವುದು ದುರ್ದೈವ: ಮಾಜಿ ಸಂಸದ ಎಚ್.ವಿಶ್ವನಾಥ್](https://www.varthabharati.in/sites/default/files/images/articles/2018/03/16/vishwanath.jpg)
ಮೈಸೂರು,ಮಾ.16: ಕಾಂಗ್ರೆಸ್ ನವರು ಎಲ್ಲವನ್ನೂ ಮಾರಾಟ ಮಾಡಿ ಆಯಿತು, ಈಗ ಟಿಕೇಟ್ ಮಾರಾಟ ಮಾಡಲು ಮುಂದಾಗಿರುವುದು ರಾಜ್ಯದ ದುರ್ದೈವದ ಸಂಗತಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪಿಡಬ್ಲ್ಯೂಡಿ ಗುತ್ತಿಗೆದಾರರ ಮೂಲಕ ಮಾರಾಟ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು ಸಂಸದ ಎಂ.ವೀರಪ್ಪ ಮೊಯ್ಲಿ ಅವರ ಟ್ವೀಟರ್ ನೋಡಿ ನನಗೆ ಬಹಳ ಸಂತೋಷವಾಗಿದೆ. ಎಲ್ಲರೂ ಅವರನ್ನು ಸುಳ್ಳು ಹೇಳುತ್ತಾರೆ ಅಂತಾರೆ, ಆದರೆ ಮೊಯ್ಲಿ ಈಗ ನಿಜವನ್ನೇ ಹೇಳಿದ್ದಾರೆ. ಕಾಂಗ್ರೆಸ್ ನವರು ಎಲ್ಲವನ್ನೂ ಮಾರಾಟ ಮಾಡಿ ಆಯಿತು, ಈಗ ಟಿಕೇಟ್ ಮಾರಾಟ ಮಾಡಲು ಮುಂದಾಗಿರೋದು ರಾಜ್ಯದ ದುರ್ದೈವದ ಸಂಗತಿ ಎಂದರು.
ಪಕ್ಷದಲ್ಲಿನ ಭ್ರಷ್ಟಾಚಾರದ ಬಗ್ಗೆ ನಾನು ಧ್ವನಿ ಎತ್ತಿದ ಬಳಿಕ ಈಗ ಜ್ಞಾನೋದಯವಾಗಿದೆ. ಇನ್ನೂ ಹಲವರಿಗೆ ಅವರ ಟೆಂಟ್ ಪೂರ್ತಿ ಕಿತ್ತು ಹೋದ ನಂತರ ಜ್ಞಾನೋದಯವಾಗಲಿದೆ. ಎಲ್ಲರಿಗೂ ಈ ವಿಚಾರ ಗೊತ್ತು. ಆದರೆ ಅಧಿಕಾರದ ಕಪಿಮುಷ್ಠಿಯಿಂದ ಕೆಲವರನ್ನು ಕಟ್ಟಿ ಹಾಕಿದರು.ಇನ್ನೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಲ್ಲಿ ಉಳಿದುಕೊಂಡಿದ್ದಾರೆ. ಸಿಎಂಗೆ ಎಚ್.ಸಿ.ಮಹದೇವಪ್ಪ ಖಜಾನೆ ಇದ್ದಂತೆ. ಈಗ ಕಾಂಗ್ರೆಸ್ ಟಿಕೇಟ್ ಮಾರಾಟ ಮಾಡಿ ಖಜಾನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.