ಎನ್ಡಿಎ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಕುರಿತು ಉನ್ನತ ನಾಯಕತ್ವದಿಂದ ನಿರ್ಧಾರ: ಎಐಎಡಿಎಂಕೆ
ಚೆನ್ನೈ, ಮಾ.16: ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ವೈಎಸ್ಆರ್ ಕಾಂಗ್ರೆಸ್ ನರೇಂದ್ರ ಮೋದಿ ಸರಕಾರದ ವಿರುದ್ಧ ಮಂಡಿಸಲು ಮುಂದಾಗಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವ ಬಗ್ಗೆ ಪಕ್ಷದ ಉನ್ನತ ಮಟ್ಟದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಐಎಡಿಎಂಕೆ ಶುಕ್ರವಾರ ತಿಳಿಸಿದೆ. ಪಕ್ಷದ ಸಮನ್ವಯಕಾರರಾದ ಒ. ಪನ್ನೀರ್ಸೆಲ್ವಂ ಹಾಗೂ ಸಹಸಮನ್ವಯಕಾರರಾದ ಕೆ. ಪಳನಿಸ್ವಾಮಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಡಿ. ಜಯಕುಮಾರ್ ತಿಳಿಸಿದ್ದಾರೆ. ಸಂಸತ್ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ವೇಳೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಲೋಕಸಭೆಯಲ್ಲಿ 37 ಸದಸ್ಯಬಲ ಹೊಂದಿರುವ ಎಐಎಡಿಎಂಕೆ ಪಕ್ಷದ ನಿರ್ಧಾರದ ಬಗ್ಗೆ ಸದ್ಯ ದೇಶಾದ್ಯಂತ ಕುತೂಹಲ ಏರ್ಪಟ್ಟಿದೆ. ಸಿಪಿಐ(ಎಂ) ಈಗಾಗಲೇ ಟಿಡಿಪಿಗೆ ಬೆಂಬಲ ಸೂಚಿಸಿದೆ. ಲೋಕಸಭೆಯಲ್ಲಿ 274 ಸದಸ್ಯಬಲ ಹೊಂದಿರುವ ಬಿಜೆಪಿ ಆಡಳಿತಕ್ಕೆ ಈ ನಿರ್ಧಾರದಿಂದ ಯಾವುದೇ ಹಾನಿಯಾಗದಿದ್ದರೂ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವು ಇತರ ಪ್ರಾದೇಶಿಕ ಪಕ್ಷಗಳನ್ನು ಓಲೈಸುವ ಅನಿವಾರ್ಯತೆ ಎದುರಾಗಿದೆ.