ಅಚೀವರ್ಸ್ ಮ್ಯಾಥಮ್ಯಾಟಿಕ್ಸ್ ಲೋಕಾರ್ಪಣೆ

ಮೂಡುಬಿದಿರೆ, ಮಾ.16: ಆಳ್ವಾಸ್ನ ಉಪನ್ಯಾಸಕರಾದ ಅಶ್ವತ್ಥ್ ಎಸ್.ಎಲ್ ಹಾಗೂ ಅಭಿರಾಂ ಬರೆದ 'ಅಚೀವರ್ಸ್ ಮ್ಯಾಥಮ್ಯಾಟಿಕ್ಸ್'-ಸಿಇಟಿ, ಎನ್ಎಟಿಎ, ಕಾಮೆಡ್.ಕೆ ಇನ್ನಿತರ ಪರೀಕ್ಷೆಗಳ ಮಾರ್ಗದರ್ಶಿ ಪುಸ್ತಕವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಕಳ ಜ್ಞಾನಸುಧಾ ಕಾಲೇಜಿನ ಮುಖ್ಯಸ್ಥ ಸುಧಾಕರ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಯೋಚನೆಗಳು ಕಡಿಮೆಯಾಗುತ್ತಿವೆ ಇಂಥಾ ಯೋಚನೆಗಳಿಗೆ ಶಿಕ್ಷಣ ಸಂಸ್ಥೆಗಳು ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯು ಮಹತ್ತರ ಹೆಜ್ಜೆಯನ್ನಿಟ್ಟಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಮ್ ಮೋಹನ್ ಆಳ್ವ ಮಾತನಾಡಿ 'ವಿದ್ಯಾರ್ಥಿಗಳು ಈ ವಯಸ್ಸಿನ ಚಂಚಲತೆಗಳನ್ನು ಹತೋಟಿಯಲ್ಲಿರಿಸಿಕೊಂಡು ಇನ್ನಷ್ಟು ಗಂಭೀರವಾಗಬೇಕು, ಕಲಿಕೆಯಲ್ಲಿ ಬಧ್ಧತೆ ಶಿಸ್ತು ಇರಬೇಕು ಇದಕ್ಕೆ ಪೂರಕವಾಗುವಂಥಾ ಎಲ್ಲಾ ವ್ಯವಸ್ಥೆಗಳನ್ನು ನನ್ನ ಸಂಸ್ಥೆಯ ಪರವಾಗಿ ನಾನು ಮಾಡುತ್ತಿದ್ದೇನೆ' ಎನ್ನುತ್ತಾ ಶೈಕ್ಷಣಿಕ ದತ್ತುಸ್ವೀಕಾರ ಯೋಜನೆಯಡಿ ಓದುತ್ತಿರುವ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತವಾಗಿ ಈ ಪುಸ್ತಕವನ್ನು ನೀಡುವುದಾಗಿ ಘೋಷಿಸಿದರು.
ಪುಸ್ತಕದ ಕರ್ತೃ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕ ಅಶ್ವತ್ಥ್ ಎಸ್ ಎಲ್ ಮಾತನಾಡಿ ವಿದ್ಯಾರ್ಥಿಗಳ ಹಲವು ಕ್ಲಿಷ್ಟ ಪ್ರಶ್ನೆಗಳಿಗೆ ಪರಿಹಾರವಾಗಿ 300 ವಿಷಯಗಳಡಿ ಸುಮಾರು 3200 ಸಮಸ್ಯೆಗಳನ್ನು ಈ ಪುಸ್ತಕದಲ್ಲಿ ಬಿಡಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಸಾರ್ಥಕತೆಯಿಂದ ಬಳಸಿದರೆ ನಮ್ಮ ಪ್ರಯತ್ನ ಫಲಕೊಡುತ್ತದೆ ಎಂದರು.
ಕಾಲೇಜಿನ ಪದವಿಪೂರ್ವ ವಿಭಾಗದ ಪ್ರಾಂಶುಪಾಲ ರಮೇಶ್ ಶೆಟ್ಟಿ, ಪದವಿಪೂರ್ವ ಗಣಿತ ವಿಭಾಗದ ಮುಖ್ಯಸ್ಥೆ ಝಾನ್ಸಿ ಉಪಸ್ಥಿತರಿದ್ದರು.







