ಸಿದ್ದರಾಮಯ್ಯ ಸರಕಾರ ಎಲ್ಲ ಜನರ ಸರಕಾರ: ಶಾಸಕ ಚೆಲುವರಾಯಸ್ವಾಮಿ
![ಸಿದ್ದರಾಮಯ್ಯ ಸರಕಾರ ಎಲ್ಲ ಜನರ ಸರಕಾರ: ಶಾಸಕ ಚೆಲುವರಾಯಸ್ವಾಮಿ ಸಿದ್ದರಾಮಯ್ಯ ಸರಕಾರ ಎಲ್ಲ ಜನರ ಸರಕಾರ: ಶಾಸಕ ಚೆಲುವರಾಯಸ್ವಾಮಿ](https://www.varthabharati.in/sites/default/files/images/articles/2018/03/16/16MDY-1.jpg)
ಮದ್ದೂರು, ಮಾ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಎಲ್ಲರ ಸರಕಾರವೇ ಹೊರತು ಯಾವುದೇ ಒಂದು ವರ್ಗದ ಜನರ ಅಭಿವೃದ್ಧಿಗೆ ಸೀಮಿತವಾಗಿಲ್ಲ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದಾರೆ.
ತಾಲೂಕಿನ ಕುಂಟನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲಿನ ಡೇರಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಎಲ್ಲಾ ವರ್ಗದ ಜನರಿಗೂ ಅನುಕೂಲವಾದ ಕಾರ್ಯಕ್ರಮಗಳನ್ನು ನೀಡಿದೆ ಎಂದರು. ಕಾಂಗ್ರೆಸ್ ಸರಕಾರ ಒಂದು ವರ್ಗಕ್ಕೆ ಸೀಮಿತವಾಗಿದೆ ಎಂಬುದಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಸರಕಾರ ಎಲ್ಲಾ ಜನರಿಗಾಗಿ ಜಾರಿಗೊಳಿಸುವ ಕಾರ್ಯಕ್ರಮಗಳನ್ನು ವಿವರಿಸಿದರು.
ವಿದ್ಯಾಶ್ರೀ, ಅನ್ನಭಾಗ್ಯ, ಆಶ್ರಯ ಮನೆ, ರೈತರ ಸಾಲಮನ್ನಾ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಶಾಸನ, ಇವೇ ಮುಂತಾದ ಕಾರ್ಯಕ್ರಮಗಳ ಅನುಕೂಲ ಎಲ್ಲಾ ವರ್ಗದ ಜನ ಪಡೆದಿದ್ದಾರೆ ಎಂದು ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರ ಸರಕಾರ ಚುನಾವಣೆಗೆ ಮುನ್ನ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಜನಪರ ಕಾರ್ಯಕ್ರಮಗಳು ಜಾರಿಗೊಂಡಿವೆ. ರಸ್ತೆ, ನಾಲೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಸಾಕಾರಗೊಂಡಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು, ಮುಂದಿನ ಚುನಾವಣೆಯಲ್ಲೂ ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ, ಜನಪರ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಹೈನುಗಾರಿಕೆ ಹೆಚ್ಚು ಅನುಕೂಲ: ಒಂದು ಹಸು ಸಾಕಿದರೆ ಇಡೀ ಕುಟುಂಬವನ್ನೇ ನಿರ್ವಹಿಸಬಹುದು. ಹಾಲಿನ ದರದಲ್ಲಿರುವ ಸ್ಥಿರತೆ ಭತ್ತ, ರಾಗಿ, ಇತರೆ ಬೆಳೆಗಳಲ್ಲಿ ಇರುವುದಿಲ್ಲ. ಹಾಗಾಗಿ ಹೈನುಗಾರಿಕೆಯಲ್ಲಿ ಸಿಗುವಷ್ಟು ಸೌಲಭ್ಯ ಇತರೆ ಉದ್ಯೋಗದಲ್ಲಿ ಸಿಗುವುದಿಲ್ಲ. ಒಂದು ಹಸು ಸಾಕಿದರೆ ಇಡೀ ಕುಟುಂಬ ನಿರ್ವಹಿಸಬಹದು ಎಂದು ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಒಂದು ಕುಟುಂಬ ಕನಿಷ್ಠ ದಿನಕ್ಕೆ ಡೇರಿಗೆ 7 ಲೀಟರ್ ಹಾಲು ಹಾಕಿದರೆ, 5 ರೂ.ನಂತೆ 35 ರೂ. ಸರಕಾರದ ಪ್ರೋತ್ಸಾಹ ಧನವೂ ದೊರೆಯುತ್ತದೆ. ಇಂತಹ ಸೌಲಭ್ಯ ದೇಶದ ಇತರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂದು ಅವರು ತಿಳಿಸಿದರು. ಹಾಲು ಉತ್ಪಾದಕರು ತಮ್ಮ ಬೆಳವಣಿಗೆ ಜತೆ ಸಂಘವನ್ನೂ ಬೆಳೆಸಬೇಕು. ಸಂಘದಲ್ಲಿ ಉಳಿತಾಯವಾಗುವ ಹಣವನ್ನು ಗ್ರಾಮದ ಬಡ ಜನರ ಆರೋಗ್ಯ, ಶಿಕ್ಷಣ, ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಾಲು ಸಂಕೀರ್ಣ ಕೊಠಡಿ ಉದ್ಘಾಟಿಸಿದ ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದಿಂದ ಹತ್ತು ಹಲವು ಸೌಲಭ್ಯಗಳಿದ್ದು ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮನ್ಮುಲ್ ನಿರ್ದೇಶಕ ಕೆ.ಎಂ.ಉಮೇಶ್, ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ವಿವೇಕಾನಂದಶೆಟ್ಟಿ, ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣಯ್ಯ, ವಿಸ್ತರಣಾಧಿಕಾರಿ ಎಂ.ಸಿ.ರಶ್ಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಜಯಾನಂದ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿ, ಮಾಜಿ ಸದಸ್ಯ ಮರಳಿಗ ಸ್ವಾಮಿ, ಸಂಘದ ಅಧ್ಯಕ್ಷ ಕೆ.ಎಂ.ಚಲುವೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಲ್.ಮರಿಲಿಂಗೇಗೌಡ, ನಿರ್ದೇಶಕರು, ಮರಳಿಗ ಯೋಗಾನಂದ, ಗುಡಿದೊಡ್ಡಿ ಪುಟ್ಟಸ್ವಾಮಿ, ಆನೆದೊಡ್ಡಿ ಶ್ರೀನಿವಾಸ್, ಇತರ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಜಯಾನಂದ ಅವರು ಡೇರಿ ಕಟ್ಟಡ ನಿರ್ಮಾಣದ ಸಹಾಯಧನದ ಚೆಕ್ ನೀಡಿದರು.