ಚಿಕ್ಕಮಗಳೂರು: ಮಾ.20 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ವಿಕಾಸಪರ್ವ ಸಮಾವೇಶ
![ಚಿಕ್ಕಮಗಳೂರು: ಮಾ.20 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ವಿಕಾಸಪರ್ವ ಸಮಾವೇಶ ಚಿಕ್ಕಮಗಳೂರು: ಮಾ.20 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ವಿಕಾಸಪರ್ವ ಸಮಾವೇಶ](https://www.varthabharati.in/sites/default/files/images/articles/2018/03/17/sl bojegowda.jpg)
ಚಿಕ್ಕಮಗಳೂರು, ಮಾ.17: ಜಿಲ್ಲೆಯಲ್ಲಿ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ಯಶ ಕಂಡಿದ್ದು, ಇದರ ಅಂತಿಮ ದಿನದ ಕಾರ್ಯಕ್ರಮದ ಅಂಗವಾಗಿ ಮಾ.20ರಂದು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ವಿಕಾಸಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಾಸಪರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ.19ರಂದು ಸಂಜೆ ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಬರಲಿದ್ದಾರೆ. ಅಂದು ಸಂಜೆ ನಗರ ಸಮೀಪದ ಮತ್ತಾವರದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾ.20ರಂದು ಬೆಳಗ್ಗೆ 11ಕ್ಕೆ ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೂದಾನದಲ್ಲಿ ನಡೆಯುವ ವಿಕಾಸಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ರಾಜ್ಯ ಸರಕಾರದ ಆಡಳಿತ ವೈಪಲ್ಯ, ಜಿಲ್ಲೆಯ ನೀರಾವರಿ ಯೋಜನೆಗಳು, ಒತ್ತುವರಿ ಸಮಸ್ಯೆ, ಕಾಫಿ ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಪಕ್ಷದ ಚುನಾವಣಾ ಪ್ರಣಾಳಿಕೆಯ ಬಗ್ಗೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಸಮಾವೇಶಕ್ಕೆ ಪ್ರತೀ ಗ್ರಾಮದಿಂದ ಕನಿಷ್ಠ 25 ಜನರ ತಂಡದಂತೆ ಹಾಗೂ ಬಿಎಸ್ಪಿ ಕಾರ್ಯಕರ್ತರು ಸೇರಿ ಐದೂ ಕ್ಷೇತ್ರಗಳಿಂದ ಸುಮಾರು 25 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೂ ಮುನ್ನ ನಗರದ ಜೆಡಿಎಸ್ ಕಚೇರಿಯಿಂದ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಕಾರ್ಯಕರ್ತರು ಎಂಜಿ ರಸ್ತೆ ಮೂಲಕ ಸಮಾವೇಶ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರಾಜ್ಯದಲ್ಲಿ ಬಿಎಸ್ಪಿ ಪಕ್ಷ ಕಳೆದ 25 ವರ್ಷಗಳಿಂದ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿರಲಿಲ್ಲ. ಆದರೆ ಅನಿವಾರ್ಯವಾಗಿ ಈ ಬಾರಿ ವರಿಷ್ಠರ ತೀರ್ಮಾನದಂತೆ ಹೊಂದಾಣಿಯಾಗಿದೆ. ಜಿಲ್ಲೆಯ ಪ್ರತೀ ಗ್ರಾಮದಲ್ಲೂ ಪಕ್ಷದ ಕಾರ್ಯಕರ್ತರಿದ್ದು, ಐದೂ ಕ್ಷೇತ್ರಗಳಲ್ಲಿ ಪ್ರತೀ ಚುನಾವಣೆಯಲ್ಲೂ ಪಕ್ಷದ ಮತದಾರರು ದ್ವಿಗುಣಗೊಂಡಿದ್ದಾರೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ. ಮಾ.20ರ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಬಿಎಸ್ಪಿಯಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ಮುಖಂಡರಾದ ಎಚ್.ಎಚ್.ದೇವರಾಜ್, ರಮೇಶ್, ಗಿರೀಶ್ ಹಾಗೂ ಬಿಎಸ್ಪಿ ಮುಖಂಡರು ಉಪಸ್ಥಿತರಿದ್ದರು.
ಜೆಡಿಎಸ್ ಉಚ್ಚಾಟಿತ ಶಾಸಕರನ್ನು ಅನರ್ಹಗೊಳಿಸಲು ಕಾನೂನು ಹೋರಾಟ: ಪರಿಷತ್ ಚುನಾವಣೆ ವೇಳೆ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡುವ ಮೂಲಕ ಪಕ್ಷಕ್ಕೆ ಅವಮಾನಿಸಿದ್ದಲ್ಲದೇ, ಚುನಾವಣಾ ಅಕ್ರಮ ನಡೆಸಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಂಡಾಯ ಶಾಸಕರ ಸ್ಥಾನವನ್ನು ಅನರ್ಹಗೊಳಿಸಲು ಕೋರಿ ಸ್ವೀಕರ್ ನೇತೃತ್ವದ ಸಮಿತಿ ವಿಚಾರಣೆ ನಡೆಸಲಿದೆ. ಈ ವಿಚಾರಣೆಯಲ್ಲಿ ಉಚ್ಚಾಟಿತ ಶಾಸಕರನ್ನು ಅನರ್ಹರೆಂದು ಘೋಷಿಸದಿದ್ದಲ್ಲಿ ಈ ಸಂಬಂಧ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ.
- ಬಿ.ಬಿ.ನಿಂಗಯ್ಯ, ಜೆಡಿಎಸ್ ಶಾಸಕ, ಮೂಡಿಗೆರೆ