ಮೋದಿ ವಿರುದ್ಧದ ಸಂಘಟಿತ ಹೋರಾಟಕ್ಕೆ ಸ್ವಾಗತ ಎಂದ ಅಮಿತ್ ಶಾ !
ಹೊಸದಿಲ್ಲಿ, ಮಾ.18: 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಇತರ ಪಕ್ಷಗಳ ಸಂಘಟಿತ ಹೋರಾಟದ ಪ್ರಸ್ತಾವವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ವಾಗತಿಸಿದ್ದಾರೆ. ವಿರೋಧ ಪಕ್ಷಗಳ ಪ್ರಸ್ತಾವಿತ ಅವಿಶ್ವಾಸ ನಿರ್ಣಯ ಮಂಡನೆಯ ಪರೀಕ್ಷೆಯಲ್ಲಿ ಎನ್ಡಿಎ 300ಕ್ಕೂ ಅಧಿಕ ಬಹುಮತದಿಂದ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವವ್ಯಕ್ತಪಡಿಸಿದ್ದಾರೆ.
"ಇಷ್ಟು ತಡವಾಗಿ ಏಕೆ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಿತ್ತು...ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಸದಸದ ರೂಢಿಗೆ ಅನುಗುಣವಾಗಿ ಚರ್ಚೆ ನಡೆಯಲಿ, ನಿರ್ಣಯದ ಖಚಿತ ಸೋಲಿನ ಬಗ್ಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಗೊತ್ತು. ಆದ್ದರಿಂದ ಸದನದ ಕಲಾಪ ನಡೆಯಲು ಅವು ಅವಕಾಶ ನೀಡುತ್ತಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಇತ್ತೀಚಿನ ಉಪಚುನಾವಣೆ ಯಶಸ್ಸಿನ ಬಳಿಕ ಬಿಜೆಪಿಯೇತರ ಒಕ್ಕೂಟ ಏರ್ಪಡುವ ಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹಿಂದೆ ಇಂದಿರಾ ಗಾಂಧಿ ವರ್ಸಸ್ ಇತರರು ಎಂಬ ಪರಿಸ್ಥಿತಿ ಬದಲಾಗಿ ಈಗ ಮೋದಿ ವರ್ಸಸ್ ಇತರರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದರು. ಭಾರತದ ಒಟ್ಟು ಭೌಗೋಳಿಕ ಪ್ರದೇಶ ಶೇಕಡ 67ರಷ್ಟು ಭಾಗದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಸಂಘಟಿತವಾಗುತ್ತಿರುವುದು ಬಿಜೆಪಿಯ ಬಲವರ್ಧನೆಯನ್ನು ಸೂಚಿಸುತ್ತದೆ. 2014ರ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳಿಗಿಂತಲೂ ಅಧಿಕ ಸ್ಥಾನಗಳನ್ನು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಅವರು ಭವಿಷ್ಯ ನುಡಿದರು.