ಮುಂಡಗೋಡ: ಯುಗಾದಿ ಹಬ್ಬದ ಪ್ರಯುಕ್ತ ಬೃಹತ್ ಬೈಕ್ ರ್ಯಾಲಿ, ಶೋಭಯಾತ್ರೆ
ಮುಂಡಗೋಡ,ಮಾ.18: ಯುಗಾದಿ ಹಬ್ಬದ ಪ್ರಯುಕ್ತ ಹಿಂದು ಜಾಗರಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಭಾನುವಾರ ಬೃಹತ್ ಬೈಕ್ ರ್ಯಾಲಿ ಹಾಗೂ ಶೋಭಯಾತ್ರೆ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಾಯಿ ಮಂದಿರದಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬೈಕ್ ರ್ಯಾಲಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸಿದ್ದರು. ಸಂಜೆ ಶೋಭಾಯಾತ್ರೆಯು ಗೋ ಪೂಜೆಯೊಂದಿಗೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ಮಾರಿಕಾಂಬಾ ದೇವಸ್ಥಾನದವರೆಗೆ ಸಾಗಿತು. ಶೋಭಾಯಾತ್ರೆಗೆ ಮೆರಗುನೀಡಲು ಚಿಕ್ಕೋಡಿಯಿಂದ ನಾಸಿಕ್ ಡೋಲ್ ಬಾರಿಸುವ ತಂಡವನ್ನು ಕರೆಸಲಾಗಿತ್ತು. ಈ ತಂಡದಲ್ಲಿ ಮಹಿಳೆಯರು ಹಾಗೂ ಪುರುಷರಿಂದ ನಾಸಿಕ್ ಡೋಲ್ ಬಾರಿಸುವುದನ್ನು ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ನೋಡಿ ಆನಂದಿಸುವ ದೃಶ್ಯ ಕಂಡುಬಂದಿತು.
ಈ ವೇಳೆ ಹಿಂದೂ ಜಾಗರಣಾ ಜಿಲ್ಲಾ ಸಂಚಾಲಕ ಭರತ ಹದಳಗಿ, ತಾಲೂಕಾ ಅಧ್ಯಕ್ಷ ಮಂಜುನಾಥ ಹರಮಲಕರ್, ಮುಖಂಡರಾದ ವಿ.ಎಸ್.ಪಾಟೀಲ್, ಎಲ್.ಟಿ.ಪಾಟೀಲ್, ಫಣಿರಾಜ ಹದಳಗಿ, ವಿನಾಯಕ ರಾಯ್ಕರ, ಗುಡ್ಡಪ್ಪ ಕಾತೂರ, ಸಂಜು ಪಿಶೆ, ರಾಮಣ್ಣಾ ಪಾಲೇಕರ, ಲಿಂಗರಾಜ ಕನ್ನೂರು, ಡಾ. ಪಿ.ಪಿ.ಛಬ್ಬಿ, ಡಾ. ಕಿರಣ ಹುಲಗೂರ, ಗುರುರಾಜ ಕಾಮತ್ ಸೇರಿದಂತೆ ಹಲವರಿದ್ದರು.