ವಂಚನೆ ಪ್ರಕರಣ: ಬೆಂಗಳೂರಿನ ಕಂಪೆನಿ ವಿರುದ್ಧ ದೂರು ನೀಡಿದ ರಾಹುಲ್ ದ್ರಾವಿಡ್
ಬೆಂಗಳೂರು, ಮಾ.18: ನಾಲ್ಕು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಬೆಂಗಳೂರು ಮೂಲದ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ.
"ನಾಲ್ಕು ಕೋಟಿ ರೂಪಾಯಿ ವಂಚಿಸಿದ ಬಗ್ಗೆ ವಿಕ್ರಮ್ ಇನ್ ವೆಸ್ಟ್ ಮೆಂಟ್ ಕಂಪೆನಿ ವಿರುದ್ಧ ದ್ರಾವಿಡ್ ಎರಡು ದಿನಗಳ ಹಿಂದೆ ದೂರು ನೀಡಿದ್ದಾರೆ" ಎಂದು ಸದಾಶಿವನಗರ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಹೇಳಿದ್ದಾರೆ.
ಹಲವು ಮಂದಿ ಕ್ರೀಡಾಪಟುಗಳಿಗೆ ಹಾಗೂ ಸೆಲೆಬ್ರಿಟಿಗಳಿಗೆ ಈ ಕಂಪನಿ ದೊಡ್ಡ ಮೊತ್ತದ ವಂಚನೆ ಮಾಡಿದೆ ಎನ್ನಲಾಗಿದ್ದು, ಪೊಲೀಸರಿಗೆ ದೂರು ನೀಡಿರುವವರಲ್ಲಿ ದ್ರಾವಿಡ್ ಮೊದಲಿಗರು.
ಕೆಲ ವಾರಗಳ ಹಿಂದೆ ಪೊಲೀಸರು ಮಾಜಿ ಕ್ರೀಡಾ ಪತ್ರಕರ್ತರೊಬ್ಬರು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದರು. ವಿಕ್ರಮ್ ಇನ್ ವೆಸ್ಟ್ ಮೆಂಟ್ ಕಂಪನಿ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು. ಕಂಪನಿಯ ಮಾಲಕ ರಾಘವೇಂದ್ರ ಶ್ರೀನಾಥ್ ಹಾಗೂ ಏಜೆಂಟ್ ಸೂತ್ರಂ ಸುರೇಶ್ (ಮಾಜಿ ಪತ್ರಕರ್ತ), ನರಸಿಂಹಮೂರ್ತಿ, ಕೆ.ಸಿ.ನಾಗರಾಜ್ ಮತ್ತು ಪ್ರಹ್ಲಾದ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ದ್ರಾವಿಡ್ 2014ರಲ್ಲಿ ಈ ಕಂಪನಿಯಲ್ಲಿ 20 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಇನ್ನೂ 4 ಕೋಟಿ ರೂಪಾಯಿಯನ್ನು ಕಂಪನಿ ಪಾವತಿಸಿಲ್ಲ ಎಂದು ದೂರು ನೀಡಲಾಗಿದೆ.
"ದ್ರಾವಿಡ್ ಅವರಿಗೆ 16 ಕೋಟಿ ರೂಪಾಯಿ ಮರುಪಾವತಿಯಾಗಿದೆ. ಇನ್ನೂ ನಾಲ್ಕು ಕೋಟಿ ಬಾಕಿ ಇದೆ. ಈ ಸಂಬಂಧ ಸೂಕ್ತ ದಾಖಲೆಗಳನ್ನೂ ದ್ರಾವಿಡ್ ಒದಗಿಸಿದ್ದಾರೆ" ಎಂದು ವಿವರ ನೀಡಿದ್ದಾರೆ.