ದೇಶದ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ: ಶಾಸಕ ಬಾವಾ

ಸುರತ್ಕಲ್, ಮಾ.18: ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿರುವ ಯುವ ಕಾರ್ಯಕರ್ತರಲ್ಲಿ ಸಂಘಟನಾ ಶಕ್ತಿಯಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದೆಂದೂ ಆಗಿರದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸುಮಾರು 700 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರು ನಗರಕ್ಕೆ ಸಮಾನಾಂತರವಾಗಿ ಸುರತ್ಕಲ್ ನಗರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೃಹತ್ ಮಾರುಕಟ್ಟೆ, ಸೌಲಭ್ಯ ಹೊಂದಿರುವ ರಸ್ತೆಗಳ ನಿರ್ಮಾಣವಾಗಿದೆ. ಬಡ ವರ್ಗಕ್ಕೆ ವಸತಿ, ಅಲ್ಪ ಸಂಖ್ಯಾತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಸಮುದಾಯಗಳ ಸಂಘ, ಭವನ, ಮಂದಿರ, ಮಸೀದಿ, ಚರ್ಚ್ಗಳಿಗೆ ಅನುದಾನ ಒದಗಿಸಲಾಗಿದೆ. ಇದರ ಬಗ್ಗೆ ಮತದಾರರಿಗೆ ತಿಳಿಸಿಕೊಡುವ ಬಹು ದೊಡ್ಡ ಜವಾಬ್ದಾರಿಯನ್ನು ಯುವ ಕಾರ್ಯಕರ್ತರು ನಿಭಾಯಿಸಿ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲು ಕೈ ಜೋಡಿಸಬೇಕು ಎಂದರು.
ಯುವ ಘಟಕದ ಅಧ್ಯಕ್ಷ ಗಿರೀಶ್ ಆಳ್ವ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಶಾಸಕ ಮೊಯ್ದಿನ್ ಬಾವಾ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ., ದೀಪಕ್ ಪೂಜಾರಿ, ಸುರೇಂದ್ರ ಕಾಂಬ್ಳಿ ಕುಮಾರ್ ಮೆಂಡನ್, ಸೊಹೈಲ್ ಕಂದಕ್, ಕೆ.ಸದಾಶಿವ ಶೆಟ್ಟಿ, ಹಿಲ್ಡಾ ಆಳ್ವ, ಶಕುಂತಳಾ ಕಾಮತ್, ಬಶೀರ್ ಅಹ್ಮದ್, ಹಬೀಬ್ ಕಾಟಿಪಳ್ಳ, ವರುಣ್ ಅಂಬಟ್, ಶಿಫಾಲಿ ರಾಜ್ , ಜೈಸನ್ ಮತ್ತಿತರರು ಉಪಸ್ಥಿತರಿದ್ದರು.







