ಬೆಂಗಳೂರು: ವೇತನಾನುದಾನಕ್ಕೆ ಒಳಪಡಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
ಬೆಂಗಳೂರು, ಮಾ.19: ಖಾಸಗಿ ಅನುದಾನ ರಹಿತ ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಕಾಲೇಜುಗಳ ಮ್ಯಾನೇಜ್ಮೆಂಟ್ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ ಮಾಡಿದ್ದಾರೆ.
ಪ್ರಾಥಮಿಕ ಶಾಲೆಯಿಂದ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಅನುದಾನ ನೀಡಲಾಗುತ್ತಿದೆ. ಆದರೆ 1987-1995ರ ಅವಧಿಯಲ್ಲಿ ಆರಂಭವಾದ ಸಾಮಾನ್ಯ ವರ್ಗದ ಖಾಸಗಿ ಅನುದಾನ ರಹಿತ ಪದವಿ ಕಾಲೇಜುಗಳಿಗೆ ಅನುದಾನ ನೀಡುವಲ್ಲಿ ಸರಕಾರ ಯಾಕೆ ತಾರತಮ್ಯ ನೀತಿ ತೋರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಿಷ್ಣುವರ್ಧನ, ರಾಜ್ಯಾದ್ಯಂತ ಸುಮಾರು 128 ಕಾಲೇಜುಗಳಿದ್ದು, ಮೂರು ಸಾವಿರ ಮಂದಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ನೂರಾರು ಮಂದಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ಇದೀಗ ನಿವೃತ್ತಿಯಂಚಿಗೆ ತಲುಪಿದ್ದಾರೆ. ಅಲ್ಲದೆ, ಈ ವರ್ಷ ನೂರಕ್ಕೂ ಹೆಚ್ಚು ಮಂದಿ ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ಸರಕಾರ ಕೂಡಲೇ ಈ ವಿಷಯವನ್ನು ಸಚಿವ ಸಂಪುಟದ ಮುಂದೆ ತಂದು 87-95ರಲ್ಲಿ ಆರಂಭವಾದ ಖಾಸಗಿ ಅನುದಾನ ರಹಿತ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಅಲ್ಲಿಯವರೆಗೂ ನಾವೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಡಳಿತ ಮಂಡಳಿಗಳು 1987ರ ಜೂ.1ರಿಂದ 1995ರ ಮಾ.31ರ ಅವಧಿಯಲ್ಲಿ ಪ್ರಾರಂಭಿಸಿ ನಡೆಸುತ್ತಿರುವ ಪದವಿ ಕಾಲೇಜುಗಳ ಸಹಿತ ಎಲ್ಲಾ ವರ್ಗದ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ನಿಯಮ 8ಕ್ಕೆ ತಿದ್ದುಪಡಿ ತಂದು 2009ರ ಮೇ 13ರಂದು ಅಧಿಸೂಚನೆ ಹೊರಡಿಸಲಾಗಿದೆ.
ಆದರೆ ಇದೇ ಅವಧಿಯಲ್ಲಿ 1987ರ ಜೂ.1ರಿಂದ 1995ರ ಮಾ.31ರ ಅವಧಿಯಲ್ಲಿ ಪ್ರಾರಂಭಿಸಿ ನಡೆಸುತ್ತಿರುವ ಸಾಮಾನ್ಯ ಆಡಳಿತ ಮಂಡಳಿಗೆ 128 ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಿಲ್ಲ. ಸಂಪುಟ ಉಪಸಮಿತಿಯ ನಡಾವಳಿಗಳ ಕಡತವು ಮುಖ್ಯಮಂತ್ರಿಗಳ ಅನುಮೋದನೆಗಾಗಿ 2018ರ ಜ.13ರಿಂದ ಅವರ ಕಚೇರಿಯಲ್ಲಿ ಕಾಯುತ್ತಿದೆ. ಮುಖ್ಯಮಂತ್ರಿಗಳು ಸದರಿ ಕಡತವನ್ನು ಅನುಮೋದಿಸಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಆರ್. ಹಾಗರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







