ಪ್ರತ್ಯೇಕ ಧರ್ಮಗಳ ವಿಚಾರ ಸಿಎಂ ಹಿಡನ್ ಅಜೆಂಡಾ: ಕುಮಾರಸ್ವಾಮಿ ಟೀಕೆ
![ಪ್ರತ್ಯೇಕ ಧರ್ಮಗಳ ವಿಚಾರ ಸಿಎಂ ಹಿಡನ್ ಅಜೆಂಡಾ: ಕುಮಾರಸ್ವಾಮಿ ಟೀಕೆ ಪ್ರತ್ಯೇಕ ಧರ್ಮಗಳ ವಿಚಾರ ಸಿಎಂ ಹಿಡನ್ ಅಜೆಂಡಾ: ಕುಮಾರಸ್ವಾಮಿ ಟೀಕೆ](https://www.varthabharati.in/sites/default/files/images/articles/2018/03/19/hdddd.jpg)
ಚಿಕ್ಕಮಗಳೂರು, ಮಾ.19: ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮ ವಿಚಾರ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯದ ಹಿಡನ್ ಅಜೆಂಡವಾಗಿದ್ದು, ಅದು ಸಿಎಂ ಅವರ ವ್ಯರ್ಥ ಕಸರತ್ತಾಗಿದೆ. ಇದರ ಫಲವನ್ನು ಸಿದ್ದರಾಮಯ್ಯ ಅವರೇ ಅನುಭವಿಸುತ್ತಾರೆಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಅವರು ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ವಿಕಾಸಪರ್ವ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಹೆಲಿಕಾಪ್ಟರ್ ಮೂಲಕ ನಗರದ ಐಡಿಎಸ್ಜಿ ಕಾಲೇಜು ಮೈದಾನ ಹೆಲಿಪ್ಯಾಡ್ಗೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಗಳ ವಿಚಾರವಾಗಿ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ ಸಮಸ್ಯೆಗಳನ್ನೇ ಹುಟ್ಟು ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬರಲಿರುವ ಚುನಾವಣೆಯಲ್ಲಿ ಸಾಧನೆ ಮಾಡುವ ಭ್ರಮೆಯಲ್ಲಿದ್ದು, ಇದು ಅವರ ವ್ಯರ್ಥ ಕಸರತ್ತಾಗಿದೆ ಎಂದ ಅವರು, ಹೋಳಾಗುತ್ತಿರುವ ಸಮಾಜವನ್ನು ಒಂದುಗೂಡಿಸುವ ಬದಲು ರಾಜ್ಯ ಸರಕಾರ ಮತ್ತಷ್ಟು ಒಡೆಯಲು ಹುನ್ನಾರ ನಡೆಸಿದೆ. ಪ್ರತ್ಯೇಕ ಧರ್ಮಗಳ ವಿಚಾರವನ್ನು ಧರ್ಮಾಧಿಕಾರಿಗಳಿಗೆ ಬಿಡಬೇಕಿತ್ತು. ಆದರೆ ಸರಕಾರ ತರಾತುರಿಯಲ್ಲಿ ಕಮಿಟಿ ನೇಮಕಮಾಡಿ, ವರದಿ ಸಿದ್ಧಪಡಿಸಿದೆ. ಈ ಬಗ್ಗೆ ಸಚಿವ ಸಂಪುಟದಲ್ಲೇನಾಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಜೆಡಿಎಸ್-ಬಿಎಸ್ಪಿ ಮೈತ್ರಿ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಗೆ ಠೇವಣಿಯೂ ಸಿಕ್ಕಿಲ್ಲ. ಬಿಎಸ್ಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಫಲ ನೀಡಲಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಸಭೆ ಮಾಡಲು ಮಾಯಾವತಿ ಅವರೊಂದಿಗೆ ಮಾತುಕತೆಯಾಗಿದೆ. ಸಭೆಗೆ ಅಖಿಲೇಶ್ಯಾದವ್, ಶರದ್ಪವರ್ ರನ್ನು ಕರೆ ತರುವ ಚರ್ಚೆ ನಡೆಯುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದರು.
ಬಳಿಕ ಅವರು ಚಿಕ್ಕಮಗಳೂರು ಸಮೀಪದ ಮತ್ತಾವರ ಗ್ರಾಮದಲ್ಲಿ ಆಯೋಜಿಸಲಾಗಿರುವ ರೈತ ಸಂವಾದ ಕಾರ್ಯಕ್ರಮದ ನಿಮಿತ್ತ ಕಾರಿನ ಮೂಲಕ ಮತ್ತಾವರಕ್ಕೆ ತೆರಳಿದರು. ಇದಕ್ಕೂ ಮುನ್ನ ಕುಮಾರಸ್ವಾಮಿ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರ ಜಯಘೋಷ ಮುಗಿಲುಮಟ್ಟಿತ್ತು. ಈ ವೇಳೆ ಜೆಡಿಎಸ್ ಮುಖಂಡರಾದ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಎಚ್.ಎಚ್.ದೇವರಾಜ್, ಎಸ್.ಎಲ್.ಭೋಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಹಾಗೂ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಅವರ ಫೋನ್ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಧಿಕಾರ ಯಾರಿಗೂ ಶಾಶ್ವತವಲ್ಲ, ದೇವೇಗೌಡರ ಮಕ್ಕಳೂ ಶಾಶ್ವತಾಗಿ ಅಧಿಕಾರದಲ್ಲಿರಲು ಆಗಲ್ಲ. ಆ ಫೋನ್ ಸಂಭಾಷಣೆಯಿಂದ ಸಿಎಂ ಅವರ ಆಂತರ್ಯ ತಿಳಿಯುತ್ತದೆ. ಮಂಜೇಗೌಡ ಓರ್ವ ಭ್ರಷ್ಟ ಅಧಿಕಾರಿ. ಅಂತವರಿಗೆ ಸಿಎಂ ರಕ್ಷಣೆ ನೀಡುತ್ತಿದ್ದಾರೆಂಬುದು ಸಾಬೀತಾಗಿದೆ. ದೇವೇಗೌಡರ ಮಕ್ಕಳ ವಿರುದ್ಧ ಯಾರನ್ನಾದರೂ ಕಣಕ್ಕಿಳಿಸಲಿ. ಎದುರಿಸುವ ಸಾಮರ್ಥ್ಯ ನಮಗಿದೆ ಎಂದ ಅವರು, ದೇವೇಗೌಡರ ಮಕ್ಕಳನ್ನು ಸೋಲಿಸಬೇಕೆಂಬ ಪದ ಬಳಕೆಯ ಅರ್ಥ ಕಾಂಗ್ರೆಸ್ನ ಸರ್ವನಾಶ ಎಂಬುದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.