ಸದನದಲ್ಲಿ ಮುಂದುವರಿದ ಪ್ರತಿಭಟನೆ, ಗದ್ದಲ: ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮುಂದೂಡಿಕೆ

ಹೊಸದಿಲ್ಲಿ, ಮಾ.19: ಕೇಂದ್ರ ಸರಕಾರದ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿರುವ ಅವಿಶ್ವಾಸ ಗೊತ್ತುವಳಿಯು ಸೋಮವಾರದಂದು ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದ ನಡುವೆ ಮತ್ತೆ ಮುಂದೂಡಲ್ಪಟ್ಟಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿರುವುದರಿಂದ ಉದ್ರಿಕ್ತಗೊಂಡಿರುವ ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿವೆ. ಪ್ರಶ್ನಾವಳಿ ಅವಧಿಯ ನಂತರ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಯೋಜಿಸಲಾಗಿತ್ತು. ಆದರೆ ಪ್ರತಿಪಕ್ಷಗಳ ಸದಸ್ಯರು ಸದಮದ ಬಾವಿಗಿಳಿದು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಪರಿಣಾಮವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಮಧ್ಯಾಹ್ನ 12 ಗಂಟೆಯವರೆಗೆ ಸದನವನ್ನು ಮುಂದೂಡಿದರು. ಸದನವು ಪುನರಾರಂಭಗೊಂಡಾಗ ಗೃಹಸಚಿವ ರಾಜ್ನಾಥ್ ಸಿಂಗ್, ಸರಕಾರವು ಅವಿಶ್ವಾಸ ಗೊತ್ತುವಳಿ ಸೇರಿದಂತೆ ಯಾವುದೇ ವಿಷಯದಲ್ಲಿ ಚರ್ಚೆ ನಡೆಸಲು ಸಿದ್ಧ. ಹಾಗಾಗಿ ಎಲ್ಲ ಪಕ್ಷಗಳು ಸಹಕಾರ ನೀಡುವಂತೆ ಮನವಿ ಮಾಡಿದರು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಗದ್ದಲ ಮುಂದುವರಿದಾಗ ಮಾತನಾಡಿದ ಮಹಾಜನ್, ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ನನ್ನ ಕರ್ತವ್ಯ. ಆದರೆ ಸದನವು ವ್ಯವಸ್ಥೆಯಲ್ಲಿಲ್ಲದಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್, ಎಡರಂಗ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಎಐಎಂಐಎಂ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಸೂಚಿಸಿವೆ. ಆದರೆ ಶಿವಸೇನೆ ಈ ನಿರ್ಣಯಕ್ಕೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಮಾತನಾಡಿರುವ ಸೇನೆಯ ಸಂಸದ ಅರವಿಂದ್ ಸಾವಂತ್, ಟಿಡಿಪಿ ಬಿಜೆಪಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಮುಂದಿನ 25 ವರ್ಷಗಳ ಕಾಲ ಬಿಜೆಪಿ ಕೇಂದ್ರದಲ್ಲಿ ಆಳ್ವಿಕೆ ನಡೆಸಲಿದೆ ಎಂಬ ಕಟ್ಟುಕತೆಗೆ ತೆರೆಯೆಳೆದಿದೆ ಎಂದು ತಿಳಿಸಿದೆ. ಆದರೆ ಇದೇ ವೇಳೆ, ಟಿಡಿಪಿಯು ತನ್ನ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ಈ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ಎನ್ಡಿಎ ಸರಕಾರಕ್ಕೆ ಸಂಪೂರ್ಣ ಬಹುಮತವಿರುವ ಕಾರಣ ಈ ನಿರ್ಣಯದಿಂದ ಅದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಡಿಎಂಕೆ ನಾಯಕ ಸ್ಟಾಲಿನ್, ಟಿಡಿಪಿಯ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವಂತೆ ತಮಿಳುನಾಡು ಸರಕಾರವನ್ನು ಆಗ್ರಹಿಸಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವಾಗಿ ಟಿಡಿಪಿ ಈ ಕ್ರಮವನ್ನು ತೆಗೆದುಕೊಂಡಿದೆ. ಹಾಗಾಗಿ ತಮಿಳುನಾಡು ಸರಕಾರ ಕೂಡಾ ಇದಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ. ಎಐಎಡಿಎಂಕೆ ಮತ್ತು ಬಿಜೆಡಿ ಅವಿಶ್ವಾಸ ನಿರ್ಣಯದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪಂಜಾಬ್ನ ಶಿರೋಮಣಿ ಅಕಾಲಿದಳ ತಾನು ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಸರಕಾರಕ್ಕೆ ಲೋಕಸಭೆಯಲ್ಲಿ ಸದಸ್ಯಬಲ ಇರುವ ಕಾರಣ ಅವಿಶ್ವಾಸ ನಿರ್ಣಯ ಮಂಡಿಸಿದರೂ ಯಾವುದೇ ಪರಿಣಾಮವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಟಿಡಿಪಿಯ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ. ಏಕಾಏಕಿ ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗುವುದು ಸರಿಯಲ್ಲ. ಇದಕ್ಕೆ ಅವರು ಆಂಧ್ರಪ್ರದೇಶದ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ. ನಾವು ಚರ್ಚೆ ನಡೆಸಲು ಬಯಸುತ್ತಿದ್ದೇವೆಯೇ ಹೊರತು ಸರಕಾರವನ್ನು ಅಸ್ಥಿರಗೊಳಿಸುವುದು ನಮ್ಮ ಉದ್ದೇಶವಲ್ಲ. ನಾವು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಎಲ್ಲ ಪಕ್ಷಗಳ ಬೆಂಬಲವನ್ನು ಪಡೆಯಲು ಬಯಸಿದ್ದೇವೆ. ಆದಷ್ಟು ಪಕ್ಷಗಳ ಬೆಂಬಲವನ್ನು ಪಡೆಯುವ ಮೂಲಕ ಚರ್ಚೆಗೆ ವೇದಿಕೆಯನ್ನು ಸಿದ್ಧಪಡಿಸುವುದು ನಮ್ಮ ಉದ್ದೇಶ. ಸರಕಾರವನ್ನು ಬೀಳಿಸುವುದು ನಮ್ಮ ಗುರಿಯಲ್ಲ ಎಂದು ಟಿಡಿಪಿ ಸಂಸದ ಆರ್.ಎಂ ನಾಯ್ಡು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದ ಮರುಕ್ಷಣವೇ ಟಿಡಿಪಿ ಸದಸ್ಯರು ವಿಶೇಷ ರಾಜ್ಯ ಸ್ಥಾನಮಾನಕ್ಕಾಗಿ ಮತ್ತು ಎಐಎಡಿಎಂಕೆ ಸದಸ್ಯರು ಕಾವೇರಿ ವಿಷಯದಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ ಪರಿಣಾಮ ಮುಂಡೂಲ್ಪಟ್ಟಿತು. ಪ್ರತಿಭಟನಾನಿರತ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಮೇಲ್ಮನೆ ಸ್ಪೀಕರ್ ವೆಂಕಯ್ಯ ನಾಯ್ಡು, ನಿರಂತರ ಗದ್ದಲ, ಪ್ರತಿಭಟನೆಗಳ ಕಾರಣ ಪದೇಪದೆ ಮುಂದೂಡಲ್ಪಡುತ್ತಿರುವ ಕಾರಣ ಸದನವು ಹಾಸ್ಯಕ್ಕೀಡಾಗಿದೆ. ಇದು ದೇಶದ ಅಥವಾ ಸಂಸತ್ನ ಹಿತಾಸಕ್ತಿಯಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಐದರಂದು ಆರಂಭವಾದ ಬಜೆಟ್ ಅಧಿವೇಶನವು ಬಹುಕೋಟಿ ಪಿಎನ್ಬಿ ವಂಚನೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ಕಾವೇರಿ ವಿಷಯದಲ್ಲಿ ಪ್ರತಿಭಟನೆ, ಗದ್ದಲಗಳ ನಡುವೆ ಬಹುತೇಕ ನಡೆಯದೇ ಮುಗಿದು ಹೋಗಿದೆ.







