ಜನಸಂಘ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಹೆಸರಿಗೆ ಮಸಿ
ಕೊಲ್ಕತ್ತಾ, ಮಾ.19: ಜನಸಂಘದ ಸ್ಥಾಪಕ ಮತ್ತು ಹಿಂದುತ್ವ ಪ್ರತಿಪಾದಕ ಶ್ಯಾಮಪ್ರಸಾದ್ ಮುಖರ್ಜಿಯವರ ಹೆಸರಿಗೆ ಕಪ್ಪು ಮಸಿ ಬಳಿದ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಗೋಡೆಯ ಮೇಲೆ ಸಂಸ್ಥೆಯ ಪ್ರಮುಖ ಹಳೆ ವಿದ್ಯಾರ್ಥಿಗಳ ಜೊತೆಗೆ ಖ್ಯಾತನಾಮರ ಹೆಸರುಗಳಿದ್ದ ಪಟ್ಟಿಯಲ್ಲಿ (ವಾಲ್ ಆಫ್ ಫೇಮ್) ಮುಖರ್ಜಿಯವರ ಹೆಸರಿಗೆ ಕಪ್ಪು ಬಣ್ಣ ಬಳಿದಿರುವುದು ಸೋಮವಾರ ಬೆಳಿಗ್ಗೆ ತರಗತಿಗಳು ಪುನರಾರಂಭವಾದ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿದೆ. ಸ್ಥಳಕ್ಕಾಗಮಿಸಿದ ಪೊಲೀಸ್ ಸಹಾಯಕ ಆಯುಕ್ತ (ಕೇಂದ್ರ) ಹಾಗೂ ಇತರ ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನದವರೆಗೂ ಈ ಕೃತ್ಯವನ್ನು ಎಸಗಿದವರು ಯಾರೆಂಬುದು ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ. ಇದು ಖೇದಕರ ವಿಷಯ. ಯಾವುದೇ ವಿದ್ಯಾರ್ಥಿ ಅಥವಾ ಯಾವುದೇ ಸುಶಿಕ್ಷಿತ ವ್ಯಕ್ತಿ ಇಂಥ ಕೃತ್ಯವನ್ನು ಎಸಗಲು ಸಾಧ್ಯವಿಲ್ಲ. ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಅನುರಾಧಾ ಲೋಹಿಯಾ ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ ಪಂಚ ಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ. 2017ರಲ್ಲಿ ವಿಶ್ವವಿದ್ಯಾಲಯದ ದ್ವಿಶತಮಾನೋತ್ಸವದ ಅಂಗವಾಗಿ ದರ ಗೋಡೆಯ ಮೇಲೆ ಸ್ವಾಮಿ ವಿವೇಕಾನಂದ, ಜಗದೀಶ್ ಚಂದ್ರ ಬೋಸ್, ಬುದ್ಧದೇಬ್ ಭಟ್ಟಾಚಾರ್ಯ ಸೇರಿದಂತೆ ನೂರು ಪ್ರಖ್ಯಾತ ಹಳೆ ವಿದ್ಯಾರ್ಥಿಗಳ ಹೆಸರನ್ನು ಕೆತ್ತಲಾಗಿತ್ತು. ಮಾರ್ಚ್ 7ರಂದು ದಕ್ಷಿಣ ಕೊಲ್ಕತ್ತಾದಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಶ್ಯಾಮಪ್ರಕಾಶ್ ಮುಖರ್ಜಿಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ತ್ರಿಪುರದಲ್ಲಿ ನಡೆದ ರಷ್ಯನ್ ಕ್ರಾಂತಿಕಾರಿ ವ್ಲಾದಿಮಿರ್ ಲೆನಿನ್ ಪ್ರತಿಮೆಯ ಧ್ವಂಸಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆಸಲಾಗಿತ್ತು.