ರಾಹುಲ್ ಭಾಷಣದ ಪ್ರೇರಣೆ: ಯುಪಿ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಪದತ್ಯಾಗ ?
ಲಕ್ನೋ , ಮಾ.21: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದಲ್ಲಿರುವ ಹಿರಿಯರು ಪಕ್ಷದಲ್ಲಿ ಯುವಕರಿಗೆ ಅವಕಾಶ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ಮಹಾಧಿವೇಶನಲ್ಲಿ ಕರೆ ನೀಡಿದ್ದರು. ರಾಹುಲ್ ಭಾಷಣದ ಸಲಹೆಯನ್ನು ಒಪ್ಪಿಕೊಂಡ ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸರದಿ. ರಾಜ್ ಬಬ್ಬರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಅವರು ಅದೇ ಹಾದಿಯಲ್ಲಿದ್ದಾರೆ. ಇದರೊಂದಿಗೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹಿರಿಯರು ತಮ್ಮ ಅಧಿಕಾರವನ್ನು ಕಿರಿಯರಿಗೆ ಬಿಟ್ಟುಕೊಡುವ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ನಿಲುವು ಕುತೂಹಲ ಕೆರಳಿಸಿದೆ. ಆದರೆ ರಾಜ್ ಬಬ್ಬರ್ ಅವರ ರಾಜೀನಾಮೆ ಇನ್ನೂ ಅಧಿಕೃತವಾಗಿಲ್ಲ. ಅವರ ರಾಜೀನಾಮೆ ಅಂಗೀಕಾರಗೊಂಡಿಲ್ಲ. ಈ ಸ್ಥಾನಕ್ಕೆ ಇನ್ನೊಬ್ಬರು ಆಯ್ಕೆಯಾಗುವ ತನಕ ರಾಜ್ ಬಬ್ಬರ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ