ಮಾರ್ಕ್ ಝುಕರ್ಬರ್ಗ್ ಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಹೊಸದಿಲ್ಲಿ: ಮಾ. 21: ದತ್ತಾಂಶ ಸೋರಿಕೆ ಆರೋಪದ ಕುರಿತಂತೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಭಾರತೀಯರ ಮಾಹಿತಿ ಸೋರಿಕೆ ಆಗಿದ್ದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸ್ಟರ್ ಝುಕರ್ಬರ್ಗ್ ನಿಮಗೆ ಭಾರತದ ಐಟಿ ಸಚಿವರ ಬಗ್ಗೆ ಮಾಹಿತಿ ಇದೆ ಎಂದು ಕೊಳ್ಳುತ್ತೇವೆ. ಒಂದು ವೇಳೆ ನಮ್ಮವರ ಮಾಹಿತಿ ಸೋರಿಕೆ ಆಗಿದ್ದರೆ ನಾವು ಸಹಿಸಿಕೊಳ್ಳುವುದಿಲ್ಲ. ನಾವು ಐಟಿ ಕಾಯ್ದೆಯಡಿ ಕಠಿಣ ನಿಯಮಗಳನ್ನು ಹೊಂದಿದ್ದೇವೆ. ಅಗತ್ಯ ಬಿದ್ದರೆ ನಿಮ್ಮನ್ನು ಇಲ್ಲಿಗೆ ನೇರವಾಗಿ ಕರೆಸುವ ತಾಕತ್ತು ಇದೆ ಎಂದು ಎಚ್ಚರಿಸಿದ್ದಾರೆ.
‘ಅಗತ್ಯವಾದರೆ ಕಠಿಣ ಕ್ರಮ’
ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಫೇಸ್ಬುಕ್ ಯಾವುದೇ ಪ್ರಯತ್ನ ಮಾಡಿದರೂ ಸಹಿಸಲು ಸಾಧ್ಯವಿಲ್ಲ ಎಂದು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ಪತ್ರಿಕೆ, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಚಿಂತನೆಗಳ ವಿನಿಮಯಕ್ಕೆ ಸರಕಾರ ಬೆಂಬಲ ನೀಡುತ್ತದೆ. ಆದರೆ, ಭಾರತದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಅಗತ್ಯವಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯೊಂದಿಗೆ ಕಾಂಗ್ರೆಸ್ ಪಕ್ಷ ಸಂಪರ್ಕ ಹೊಂದಿದೆ ಎಂದು ಅವರು ಆರೋಪಿಸಿರುವ ಅವರು, ಕೇಂಬ್ರಿಜ್ ಅನಾಲಿಟಿಕ್ ಸಿಇಒ ಅವರೊಂದಿಗೆ ಭಾರತದ ಎಷ್ಟು ಪ್ರಮಾಣದ ದತ್ತಾಂಶವನ್ನು ಹಂಚಿಕೊಂಡಿದೆ ಎಂದು ನಾವು ಕಾಂಗ್ರೆಸ್ ಅನ್ನು ಪ್ರಶ್ನಿಸುತ್ತೇವೆ ಎಂದಿದ್ದಾರೆ.