ಸಿಂಗಾಪುರ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ದಿ: ಶಾಸಕ ಸುಧಾಕರ್
![ಸಿಂಗಾಪುರ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ದಿ: ಶಾಸಕ ಸುಧಾಕರ್ ಸಿಂಗಾಪುರ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ದಿ: ಶಾಸಕ ಸುಧಾಕರ್](/images/placeholder.jpg)
ಚಿಕ್ಕಬಳ್ಳಾಪುರ,ಮಾ.21: ಸಿಂಗಾಪುರ ಮಾದರಿಯಲ್ಲಿ ಚಿಕ್ಕಬಳ್ಳಾಪುರ ನಗರದ ಅಭಿವೃದ್ದಿ ಮಾಡಲು ಸಂಕಲ್ಪ ತೊಟ್ಟಿದ್ದು, ಇದಕ್ಕೆ ಅಗತ್ಯವಿರುವ ನೀಲಿನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಗರಸಬೆ ವತಿಯಿಂದ ಆಯೋಜಿಸಿದ್ದ ನಾನಾ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಛತ್ರಗಳ ನಗರ ಎಂದೇ ಖ್ಯಾತಿ ಪಡೆದಿದ್ದ ಚಿಕ್ಕಭಳ್ಳಾಪುರದಲ್ಲಿ ಇಂದು ಛತ್ರಗಳು ವಾಣಿಜ್ಯ ಮಳಿಗೆಗಳಾಗುತ್ತಿರುವುದನ್ನು ತಪ್ಪಿಸಲು ಶ್ರಮಿಸಲಾಗುತ್ತಿದೆ ಎಂದರು.
ಸಿಂಗಾಪುರ ಪ್ರಸ್ತುತ ವಿಶ್ವ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಅತೀ ಕಡಿಮೆ ಅವಧಿಯಲ್ಲಿ ಬೆಳೆದ ನಗರ ಎಂಬ ಖ್ಯಾತಿ ಪಡೆದಿದೆ. ಅದೇ ಮಾದರಿಯಲ್ಲಿ ಚಿಕ್ಕಬಳ್ಳಾಪುರವನ್ನು ಕೆಲವೇ ದಿನಗಳಲ್ಲಿ ನಿರ್ಮಿಸುವ ಗುರಿ ಹೊಂದಿದ್ದು, ಇದಕ್ಕೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳ ಸಹಕಾರ ಮತ್ತು ಹಿಂದಿನ ನಾಯಕರು ಹಾಕಿ ಕೊಟ್ಟ ಮಾರ್ಗ ಸಹಕಾರಿಯಾಗಿದೆ ಎಂದರು.
ಇದು ಅಭಿವೃದ್ದಿಯ ಆರಂಭ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ದಿಯ ವೇಗ ಹೆಚ್ಚಿಸಲಾಗುವುದು. ಪ್ರಸ್ತುತ ಕೇವಲ 96 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಆದರೆ ಮುಂದಿನ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ವಿಶ್ವದಲ್ಲಿಯೇ ಮಾದರಿ ನಗರವಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
ಚಿಕ್ಕಬಳ್ಳಾಪುರವನ್ನು ಮಾದರಿಯನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪ ತಜ್ಞರಿಂದ ನಕ್ಷೆಗಳನ್ನು ಸಿದ್ದಪಡಿಸಲಾಗಿದೆ. ಉದ್ಯಾನಗಳು, ಹೊರ ವರ್ತುಲ ರಸ್ತೆ ನಿರ್ಮಾಣ, ಹೊರಾಂಗಣ ವ್ಯಾಯಾಮ ಶಾಲೆಗಳು ಸೇರಿದಂತೆ ನಾನಾ ರೀತಿಯ ಅಭಿವೃದ್ದಿಗಳಿಗಾಗಿ ನೀಲನಕ್ಷೆ ಸಿದ್ದವಾಗಿದ್ದು, ಕೆಲವೇ ದಿನಗಳಲ್ಲಿ ಇದು ಸಾಕಾರವಾಗಲಿದೆ ಎಂದರು.
ತಮ್ಮ ಕನಸಿನ ಚಿಕ್ಕಬಳ್ಳಾಪುರ ರೂಪುಗೊಂಡ ನಂತರ ಪ್ರಸ್ತುತ ಲಕ್ಷಗಳಲ್ಲಿರುವ ನಿವೇಶನಗಳು ಕೋಟಿಗೆ ಮುಟ್ಟಲಿವೆ. ಜೊತೆಗೆ ಪ್ರಸ್ತುತ ಬೆಂಗಳೂರಿನಿಂದ ಇಲ್ಲಿಗೆ ಪ್ರಯಾಣ ಮಾಡುತ್ತಿರುವವರನ್ನು ಕಾಣಬಹುದು, ಆದರೆ ನಂತರ ಚಿಕ್ಕಬಳ್ಳಾಪುರದಲ್ಲಿ ನೆಲೆಸಿ ಬೆಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಸುವವರನ್ನು ಕಾಣುವಂತಾಗುತ್ತೀರಿ ಎಂದು ಶಾಸಕರು ಭರವಸೆ ನೀಡಿದರು.
ಗುಡಿಸಲು ಮುಕ್ತ ನಗರ ಚಿಕ್ಕಬಳ್ಳಾಪುರವನ್ನು ಮಾದರಿ ಮಾಡಲು ಮೊದಲು ಗುಡಿಸಲು ಮುಕ್ತ ನಗರ ಮಾಡುವ ಸಂಕಲ್ಪ ಹೊಂದಲಾಗಿದೆ. ಹಾಗಾಗಿಯೇ ನಗರದಲ್ಲಿರುವ 6,342 ಮಂದಿ ನಿವೇಶನ ರಹಿತರನ್ನು ಈಗಾಗಲೇ ಗುರುತಿಸಲಾಗಿದೆ. ಇವರಿಗಾಗಿ ತಾಲೂಕಿನ ಕಳವಾರ ಗ್ರಾಮದ ಬಳಿ 21 ಎಕರೆ ಮತ್ತು ಅಡವಿಗೊಲ್ಲವಾರಿಹಳ್ಳಿ ಬಳಿ 20 ಎಕರೆ ಸೇರಿ ಒಟ್ಟು 40 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ಈ ಭೂಮಿಯಲ್ಲಿ ನಗರದ ನಿವೇಶನ ರಹಿತರಿಗೆ ನಿವೇಶನ ನೀಡುವ ಜೊತೆಗೆ ಮನೆ ನಿರ್ಮಿಸಿಕೊಡುವ ಮೂಲಕ ಮನೆ ರಹಿತರು, ಗುಡಿಸಿಲುಗಳ ಮುಕ್ತ ನಗರವಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದಿ ಪಡಿಸಲಾಗುವುದು. ಇನ್ನು ನಾನಾ ವೃತ್ತಿಪರ ಶಿಕ್ಷಣ ಪಡೆದ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ಕೈಗಾರಿಕಾ ನಗರಕ್ಕೆ ಚಿಕ್ಕಬಳ್ಳಾಪುರ ಯೋಗ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ. ನಗರಸಭಾ ಸದಸ್ಯರು ಸೇರಿದಂತೆ ಇತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯರಿಂದ ಶಾಸಕ ಡಾ.ಕೆ. ಸುಧಾಕರ್ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.