ಸರಕಾರಿ ನೌಕರರ ಕುಟುಂಬ ಯೋಜನೆ ಭತ್ಯೆ ಸ್ಥಗಿತ: ಕೇಂದ್ರದ ನಿರ್ಧಾರದ ವಿರುದ್ಧ ಮೇಲ್ಮನವಿ
ಹೊಸದಿಲ್ಲಿ, ಮಾ.22: ಸರಕಾರಿ ನೌಕರ ಅಥವಾ ಅವರ ಪತ್ನಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದರೆ ಅವರಿಗೆ ನೀಡಲಾಗುತ್ತಿದ್ದ ಕುಟುಂಬ ಯೋಜನೆ ಭತ್ಯೆಯನ್ನು ತಡೆಹಿಡಿಯುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಆಡಳಿತಾತ್ಮಕ ಪೀಠ (ಸಿಎಟಿ)ವು ಸರಕಾರ ಮತ್ತು ದಿಲ್ಲಿ ಪೊಲೀಸ್ ಇಲಾಖೆಗೆ ಸೂಚಿಸಿದೆ. 2011ರಲ್ಲಿ ವಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಳೆದ ವರ್ಷ ಜೂನ್ ತಿಂಗಳವರೆಗೂ ಕುಟುಂಬ ಯೋಜನೆ ಭತ್ಯೆಯ ರೂಪದಲ್ಲಿ ಮಾಸಿಕ 210 ರೂ. ಪಡೆಯುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ಕೆ.ಎನ್ ಶ್ರೀವಾಸ್ತವ ನೇತೃತ್ವದ ಪೀಠವು ಕೇಂದ್ರ ಮತ್ತು ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ಕೋರಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಪೀಠವು ಮೇ 21ಕ್ಕೆ ನಿಗದಿಪಡಿಸಿದೆ.
ಈ ಯೋಜನೆಯನ್ನು ಕೇಂದ್ರ ಸರಕಾರವು 1979ರಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯನ್ವಯ ಎರಡು ಅಥವಾ ಮೂರು ಮಕ್ಕಳನ್ನು ಪಡೆದ ನಂತರ ಸಂತಾನಹರಣ ಚಿಕಿತ್ಸೆಗೆ ಒಳಗಾಗುವ ಸರಕಾರಿ ನೌಕರರಿಗೆ ವೈಯಕ್ತಿಕ ವೇತನದ ರೂಪದಲ್ಲಿ ವಿಶೇಷ ಭತ್ಯೆ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರಕಾರವು 2017ರ ಜುಲೈ ಒಂದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಜನಸಂಖ್ಯೆ ನಿಯಂತ್ರಣದ ಮತ್ತು ಸಣ್ಣ ಕುಟುಂಬವನ್ನು ಹೊಂದುವ ಬಗೆಗಿನ ಜಾಗೃತಿಯು ಹೆಚ್ಚಾಗಿರುವುದರಿಂದ ಅದಕ್ಕಾಗಿ ಭತ್ಯೆಯನ್ನು ನೀಡುವ ಅಗತ್ಯವಿಲ್ಲ ಎಂದು ಏಳನೇ ವೇತನ ಆಯೋಗ ಸಲಹೆ ನೀಡಿತ್ತು. ಇದೀಗ ಕುಟುಂಬ ಯೋಜನೆ ಭತ್ಯೆಯನ್ನು ಸ್ಥಗಿತಗೊಳಿಸಿರುವುದರಿಂದ ಸದ್ಯ ಈ ಯೋಜನೆಯ ಷರತ್ತಿನಂತೆ ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಭತ್ಯೆಯನ್ನು ಪಡೆಯುತ್ತಿದ್ದ ಕೇಂದ್ರ ಸರಕಾರಿ ನೌಕರರಿಗೆ ಭತ್ಯೆ ಸಿಗದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಮೇಲ್ಮನವಿಯನ್ನು ಸಲ್ಲಿಸಿರುವ ಪೊಲೀಸ್ ಪೇದೆ ಬಾಬು ಲಾಲ್ ಮಿತರ್ವಲ್, ತಾನು ಶಾಶ್ವತ ವಾಸೆಕ್ಟಮಿಗೆ ಒಳಗಾಗಿದ್ದು, ಸರಕಾರದ ಈ ನಿರ್ಧಾರ ಸಂವಿಧಾನದಡಿ ತನ್ನ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.