ಸ್ವಯಂ ಘೋಷಿತ ಆಸ್ತಿ ತೆರಿಗೆದಾರರು ಬೀದಿ ಪಾಲಾಗಲು ಬಿಡುವುದಿಲ್ಲ: ವಿಜಯಲಕ್ಷ್ಮೀ ಸಿ. ಪಾಟೀಲ್
ಶಿವಮೊಗ್ಗ, ಮಾ. 22: 'ಸ್ವಯಂ ಘೋಷಿತ ಆಸ್ತಿ ತೆರಿಗೆ ಸಲಹೆಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ಅವರು ಬೀದಿಪಾಲಾಗಲು ಅವಕಾಶ ಕಲ್ಪಿಸುವುದಿಲ್ಲ' ಎಂದು ಉಪ ಮೇಯರ್ ವಿಜಯಲಕ್ಷ್ಮೀ ಸಿ. ಪಾಟೀಲ್ರವರು ಭರವಸೆ ನೀಡಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ವಯಂ ಘೋಷಿತ ಆಸ್ತಿ ತೆರಿಗೆದಾರರಿಗೆ ಮೀಸಲಿಡಲಾಗಿದ್ದ ಕೊಠಡಿಗೆ ಬೀಗ ಹಾಕಿರುವ ಕುರಿತಂತೆ ತನಗೆ ಮಾಹಿತಿಯಿರಲಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ವಿವರ ಗಮನಿಸಿದ ನಂತರ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಸಲಹೆಗಾರರಿಗೆ ಸೂಕ್ತ ಕೊಠಡಿಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಲಹೆಗಾರರು ನಾಗರೀಕರಿಗೆ ಉತ್ತಮ ಸೇವೆ ನೀಡಿಕೊಂಡು ಬರುತ್ತಿದ್ದಾರೆ. ಸ್ವಯಂ ಘೋಷಿತ ತೆರಿಗೆ ವ್ಯವಸ್ಥೆಯಡಿ ಅರ್ಜಿ ಭರ್ತಿ ಮಾಡಿಕೊಡುವ ಮೂಲಕ ನೆರವಾಗುತ್ತಿದ್ದಾರೆ. ಹಾಗೆಯೇ ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಡಿ ಕಾರ್ಯನಿ ರ್ವಹಿಸುತ್ತಿರುವವರೆಲ್ಲರೂ ಪದವೀಧರರಾಗಿದ್ದು, ಈ ಮೊದಲು ನಿರುದ್ಯೋಗಿಗಳಾಗಿದ್ದವರಾಗಿದ್ದಾರೆ. ಸಲಹೆಗಾರರಾಗಿ ಕಾರ್ಯನಿರ್ವಹಣೆ ಮಾಡುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಂಡು, ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
ದಿಢೀರ್ ಬೀಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ಸಲಹೆಗಾರರಿಗೆ ಪಾಲಿಕೆ ಕಚೇರಿ ಆವರಣದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ಈ ಕೊಠಡಿಗೆ ದಿಢೀರ್ ಆಗಿ ಅಧಿಕಾರಿಗಳು ಬೀಗ ಹಾಕಿದ್ದರು. ಸಲಹೆಗಾರರನ್ನು ಕೊಠಡಿಯಿಂದ ತೆರವುಗೊಳಿಸಿ, ಇಂದಿರಾ ಕ್ಯಾಂಟಿನ್ಗೆ ಸಂಬಂಧಿಸಿದ ಪರಿಕರಗಳನ್ನು ದಾಸ್ತಾನಿರಿಸಿದ್ದರು. ಇದರಿಂದ ಸಲಹೆಗಾರರು ಬೀದಿಪಾಲಾಗುವಂತಾಗಿತ್ತು. ಅರ್ಜಿ ಭರ್ತಿ ಮಾಡಲು ಸಾಧ್ಯವಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಪಾಲಿಕೆಯ ಹಿರಿಯ ಅಧಿಕಾರಿಗಳ ಬಳಿ ಸೂಕ್ತ ಕೊಠಡಿ ವ್ಯವಸ್ಥೆ ಮಾಡಿಕೊಡುವಂತೆ ಕೋರಿಕೊಂಡಿದ್ದರೂ ಇಲ್ಲಿಯವರೆಗೂ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಯಾವುದೇ ಭರವಸೆ ನೀಡಿಲ್ಲ. ಇದರಿಂದ ನಾವುಗಳು ಜೀವನ ನಡೆಸುವುದೆ ದುಸ್ತರವಾಗಿ ಪರಿಣಮಿಸಿದೆ ಎಂದು ಸಲಹೆಗಾರರು ತಮ್ಮ ಅಳಲು ತೋಡಿಕೊಂಡಿದ್ದರು.