ಯಾದವ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಯಡಿಯೂರಪ್ಪ
![ಯಾದವ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಯಡಿಯೂರಪ್ಪ ಯಾದವ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಯಡಿಯೂರಪ್ಪ](/images/placeholder.jpg)
ತುಮಕೂರು.ಮಾ.23: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೊಲ್ಲ(ಯಾದವ) ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಶ್ರೀದೇವಿ ಕಾಲೇಜು ಮೈಧಾನದಲ್ಲಿ ಶುಕ್ರವಾರ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೊಲ್ಲ(ಯಾದವ) ಸಮಾವೇಶ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತಿದ್ದ ಅವರು, ರಾಜ್ಯದಲ್ಲಿ 35 ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ಯಾದವ ಸಮಾಜದಲ್ಲಿ ಯಾವೊಬ್ಬ ಶಾಸಕರಾಗಲಿ, ಸಚಿವರಾಗಲಿ ಇಲ್ಲ. ಈ ಸಮುದಾಯದ ಜನರು ಅರ್ಥಿಕವಾಗಿ ಶೈಕ್ಷಣಿಕವಾಗಿ, ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರ ಸರಕಾರ ರಾಜ್ಯದಲ್ಲಿ ಅರ್ಥಿಕ ಪರಿಸ್ಥಿತಿಯನ್ನು ಧೂಳಿಪಟ ಮಾಡಿ, ಹಗಲು ದರೊಡೆ ಮಾಡುತ್ತಿರುವ ಸರಕಾರವನ್ನು ಕಿತ್ತೊಗೆಯಲು ಕಾಯುತ್ತಿದ್ದಾರೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಕೇಂದ್ರದಲ್ಲಿ ಮೋದಿ ಸರಕಾರದಂತೆ ರಾಜ್ಯದಲ್ಲಿಯೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಯಾದವ ಸಮುದಾಯದವರಿಗೆ ರಾಜ್ಯದಲ್ಲಿ 3 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡುವುದಾಗಿ ತಿಳಿಸಿದ ಅವರು, ಯಾದವ ಸಮುದಾಯದ ಶ್ರೀಮಠದ ಅಭಿವೃದ್ದಿಗೆ ಹಿಂದೆ 2 ಕೋಟಿ ಅನುದಾನವನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಮಠದ ಅಭಿವೃದ್ದಿಗೆ ಅಧಿಕಾರ ಪಡೆದ ಮೂರು ತಿಂಗಳಲ್ಲಿಯೇ ಇನ್ನೂ ಒಂದು ಕೋಟಿ ಅನುದಾನವನ್ನು ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಗೊಲ್ಲ ಸಮುದಾಯವು ಅತ್ಯಂತ ಹಿಂದುಳಿದಿರುವ ಜನಾಂಗವಾಗಿದ್ದು, ಜನಾಂಗವು ಎಲ್ಲಾ ಕ್ಷೇತ್ರದಲ್ಲೂ ಸಮಾನವಾದ ಅವಕಾಶಗಳನ್ನು ಹೊಂದಬೇಕಾಗಿದೆ. ಗೊಲ್ಲ ಸಮುದಾಯದಲ್ಲಿ ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಡೆ ಇರಿಸುವ ಪದ್ದತಿ ಇದೆ. ಇಂತಹ ಅನಿಷ್ಠ ಪದ್ದತಿಯನ್ನು ಹೋಗಲಾಡಿಸಬೇಕಾಗಿದೆ. ಪ್ರತಿಯೊಂದು ಗೊಲ್ಲಾರ ಹಟ್ಟಿಯಲ್ಲೂ ಒಂದೊಂದು ಕೃಷ್ಣ ದೇವಾಲಯವನ್ನು ನಿರ್ಮಾಣ ಮಾಡುವ ಕೆಲಸ ಅಗಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಲ್ಲಾರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು
ಸಮುದಾಯದ ಎಲ್ಲಾ ಜನರು ಅರ್ಥಿಕವಾಗಿ,ರಾಜಕೀಯವಾಗಿ ಸಮಾಜದ ಇತರ ಸಮುದಾಯದಂತೆ ಸಮಾನವಾಗಿ ಬಾಳಬೇಕದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಮಾಡಿ, ಕರ್ನಾಟಕವು ಯಡಿಯೂರಪ್ಪನವರ ಮೂಲಕ ಅಭಿವೃದ್ದಿ ಹೊಂದಬೇಕು ಎಂದು ತಿಳಿಸಿದರು
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಮಾತನಾಡಿ, ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದಿಂದ ಕಳೆದ ನಾಲ್ಕುವರೆ ವರ್ಷದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ. ರಾಜ್ಯದಲ್ಲಿ ಕರ್ನಾಟಕ ನಂಬರ್ 1 ಎಂಬ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಕರ್ನಾಟಕವನ್ನು ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಸರಕಾರ, ಕೇಂದ್ರದಲ್ಲಿ 60 ವರ್ಷ ಅಡಳಿತ ಮಾಡುವಾಗ ನವ ಕರ್ನಾಟಕದ ಮಾತು ಎಲ್ಲಿ ಹೋಗಿತ್ತು ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀಯಾದವನಂದ ಸ್ವಾಮೀಜಿ, ಬಿಬಿಎಂಪಿ ಸದಸ್ಯೆ ಪೂರ್ಣಿಮಾ, ಟಿ.ಡಿ ಶ್ರೀನಿವಾಸ್, ಮಾಜಿ ಸಂಸದ ಜಿ.ಎಸ್ ಬಸವರಾಜು, ಶಾಸಕ ಸುರೇಶ್ ಗೌಡ, ಜಿಲ್ಲಾಧ್ಯಕ್ಷ ಜ್ಯೂತಿ ಗಣೇಶ್,ಹುಲಿನಾಯ್ಕರ್, ಕಿರಣ್ ಕುಮಾರ್, ನಾಗರಾಜು, ಬೇಟ್ಟಸ್ವಾಮಿ,ಬಿ.ಕೆ ಮಂಜುನಾಥ್, ತಿಪ್ಪೇಸ್ವಾಮಿ, ಪ್ರೇಮ ನಾಗಯ್ಯ, ಮಸಾಲೆ ಜಯರಾಮ್ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.