ಸಿ.ಟಿ.ರವಿ ಸೋಲಿಸಲು ಸಿಎಂ ಬೇಡ, ಮತದಾರರೇ ಸಾಕು: ಯೂತ್ ಕಾಂಗ್ರೆಸ್ ತಿರುಗೇಟು
![ಸಿ.ಟಿ.ರವಿ ಸೋಲಿಸಲು ಸಿಎಂ ಬೇಡ, ಮತದಾರರೇ ಸಾಕು: ಯೂತ್ ಕಾಂಗ್ರೆಸ್ ತಿರುಗೇಟು ಸಿ.ಟಿ.ರವಿ ಸೋಲಿಸಲು ಸಿಎಂ ಬೇಡ, ಮತದಾರರೇ ಸಾಕು: ಯೂತ್ ಕಾಂಗ್ರೆಸ್ ತಿರುಗೇಟು](https://www.varthabharati.in/sites/default/files/images/articles/2018/03/23/shivakumara.jpg)
ಚಿಕ್ಕಮಗಳೂರು, ಮಾ.23: ಶಾಸಕ ಸಿ.ಟಿ.ರವಿಯವರನ್ನು ಸೋಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕ್ಕಮಗಳೂರಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವೇ ಇಲ್ಲ, ರವಿ ಅವರನ್ನು ಕ್ಷೇತ್ರದ ಜನತೆಯೇ ಈ ಬಾರಿ ತಿರಸ್ಕರಿಸುತ್ತಾರೆ. ಸಿಎಂ ಅವರು ಶಾಸಕ ರವಿ ಅವರ ಬಗ್ಗೆ ಹೊಸದಾಗಿ ಏನನ್ನೂ ಸೃಷ್ಟಿಸಿಕೊಂಡು ಹೇಳಿಲ್ಲ. ಕ್ಷೇತ್ರದ ಜನತೆ ಮಾತನಾಡುತ್ತಿರುವುದನ್ನೇ ಹೇಳಿದ್ದಾರೆ ಎಂದು ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಚಿಕ್ಕಮಗಳೂರಿನಲ್ಲಿ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸಿ.ಟಿ.ರವಿ ಅವರನ್ನು ಲೂಟಿ ರವಿ ಎಂದು ಕ್ಷೇತ್ರದ ಜನ ಕರೆಯುತ್ತಾರೆಂಬ ಹೇಳಿಕೆಗೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದ್ದರು.
ತಮ್ಮಯ್ಯ ಅವರ ಸವಾಲಿಗೆ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿರುವ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಸಾಮಾನ್ಯವಾಗಿ ಸರಿ ಸಮಾನರಾದವರೊಂದಿಗೆ ಸೆಣಸಾಡುವುದು ಸಂಪ್ರದಾಯ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಥಳೀಯ ಶಾಸಕ ಸಿ.ಟಿ.ರವಿ ವಿರುದ್ಧ ಸ್ಪರ್ಧೆಗಿಳಿದರೆ ಆನೆ ಆಮೆಯೊಂದಿಗೆ ಸೆಣಸಿದಂತಾಗುತ್ತದೆ. ಹಾಗಾಗಿ ಮುಖ್ಯಮಂತ್ರಿಗಳು ಅವರಿಗೆ ಸರಿಸಮಾನರಾದವರೊಂದಿಗೆ ಸ್ಪರ್ಧಿಸುತ್ತಾರೆ. ರವಿ ಅವರನ್ನು ಸೋಲಿಸಲು ಮತದಾರರೇ ಸಾಕು ಎಂದು ಅವರು ತಿರುಗೇಟು ನೀಡಿದ್ದಾರೆ.
ಶಾಸಕ ಸಿ.ಟಿ.ರವಿ ಅವರ 15 ವರ್ಷಗಳ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ ನೋಡಿದ್ದಾರೆ. ಶಾಸಕರಾಗುವುದಕ್ಕಿಂತ ಮುಂಚೆ ಅವರು ಆರ್ಥಿಕವಾಗಿ ಹೇಗಿದ್ದರು, ನಂತರ ಹೇಗಾಗಿದ್ದಾರೆ ಎಂಬುದನ್ನು ತಿಳಿದಿದ್ದಾರೆ. ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಫುಡ್ ಪಾರ್ಕ್, ಮಿನಿ ವಿಮಾನ ನಿಲ್ದಾಣ ಮಾಡಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಶಾಸಕರು 15 ವರ್ಷಗಳಲ್ಲಿ ಮಾಡಿರುವ ದತ್ತಪೀಠದ ಅಭೂತಪೂರ್ವ ಅಭಿವದ್ಧಿಯನ್ನೂ ಮನಗಂಡಿದ್ದಾರೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ, ಅದೇ ರೀತಿ ಶಾಸಕ ಸಿ.ಟಿ.ರವಿ ಅವರ ಕಾರ್ಯಗಳ ಬಗ್ಗೆ ಯಾರೂ ಆಣೆ, ಪ್ರಮಾಣ ಮಾಡುವ ಅಗತ್ಯವಿಲ್ಲ, ಕ್ಷೇತ್ರದ ಜನತೆಗೆ ಸಿ.ಟಿ.ರವಿಯವರು ಮೂರು ಬಾರಿ ಶಾಸಕರಾಗಿ ದುಡಿದಿರುವುದು ಸಾಕೆನಿಸಿದೆ. 15 ವರ್ಷಗಳಲ್ಲಿ ಅವರು ಏನು ಮಾಡಿದರು ಎಂದು ಜನ ಪ್ರಶ್ನಿಸುತ್ತಿದ್ದಾರೆ, ಇದು ಶಾಸಕರಿಗೆ ಗೊತ್ತಿದ್ದರೂ ಅವರು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದ ಅವರು, ಮೂರಕ್ಕೆ ಮುಕ್ತಾಯ ಎಂಬ ನಾಣ್ಮುಡಿಯಂತೆ ಶಾಸಕ ಸಿ.ಟಿ.ರವಿಯವರು ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆಯಾಗಿ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.