ಕೋರ್ ಸಮಿತಿಯಲ್ಲಿ ಚರ್ಚೆ: ಅಣ್ಣಾ ಹಝಾರೆ
ಬೇಡಿಕೆಯ ಬಗ್ಗೆ ಸರಕಾರದ ಪ್ರತಿಕ್ರಿಯೆ
ಹೊಸದಿಲ್ಲಿ, ಮಾ.24: ಭ್ರಷ್ಟಾಚಾರ ನಿಗ್ರಹಕ್ಕೆ ಸಶಕ್ತ ಸಂಸ್ಥೆಯೊಂದನ್ನು ರಚಿಸಬೇಕು ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟದಿಂದ ಅವರನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬ ತನ್ನ ಬೇಡಿಕೆಯ ಬಗ್ಗೆ ಸರಕಾರ ಕರಡು ಪತ್ರವೊಂದನ್ನು ಕಳುಹಿಸಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ತಿಳಿಸಿದ್ದಾರೆ.
ಬೇಡಿಕೆಯ ಬಗ್ಗೆ ಸರಕಾರ ಕರಡು ಪತ್ರವೊಂದನ್ನು ಕಳಿಸುತ್ತದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಈ ಕರಡು ಪತ್ರದಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಪ್ರತಿಭಟನಾಕಾರರ ಪ್ರಧಾನ ಸಮಿತಿ(ಕೋರ್ ಕಮಿಟಿ)ಯಲ್ಲಿ ಚರ್ಚಿಸಲಾಗುವುದು ಎಂದು ಹಝಾರೆ ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರದಲ್ಲಿ ಲೋಕಪಾಲರನ್ನು ಹಾಗೂ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸಬೇಕು, ಕೃಷ್ಯುತ್ಪನ್ನಗಳಿಗೆ ನ್ಯಾಯ ಬೆಲೆ ಒದಗಿಸುವ ಬಗ್ಗೆ ಸ್ವಾಮಿನಾಥನ್ ಆಯೋಗ ನೀಡಿರುವ ಶಿಫಾರಸ್ಸನ್ನು ಜಾರಿಗೊಳಿಸಬೇಕು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಯಾಗಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಝಾರೆ ಅನಿರ್ದಿಷ್ಟ ಕಾಲಾವಧಿಯ ಪ್ರತಿಭಟನೆ ಆರಂಭಿಸಿದ್ದಾರೆ. ಶುಕ್ರವಾರ ಈ ಪ್ರತಿಭಟನೆಯಲ್ಲಿ ಸುಮಾರು 10,000 ಮಂದಿ, ಶನಿವಾರ 3,000 ಮಂದಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.