ಬೆಂಗಳೂರು: ನಾಲ್ವರು ದರೋಡೆಕೋರರ ಬಂಧನ
ಬೆಂಗಳೂರು, ಮಾ.24: ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಕುಖ್ಯಾತ ಕಳ್ಳರು ಸೇರಿದಂತೆ ನಾಲ್ವರು ದರೋಡೆಕೋರರನ್ನು ಬಂಧಿಸಿ 25ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಳವಳ್ಳಿಯ ವನಗ ಗ್ರಾಮದ ಸಿದ್ದ ಅಲಿಯಾಸ್ ನಾಗರಾಜ(25), ಇಟ್ಟುಮಡುವಿನ ಸತ್ಯ ಅಲಿಯಾಸ್ ಸತೀಶ(43) ಎಂಬುವರೆ ಬಂಧಿತ ಮನೆ ಕಳ್ಳರಾಗಿದ್ದಾರೆ. ಇವರಿಂದ ಮಾಲು ಖರೀದಿಸುತ್ತಿದ್ದ ಉತ್ತರಹಳ್ಳಿಯ ಬಾಬು(25) ಹಾಗೂ ಕತ್ರಿಗುಪ್ಪೆಯ ಸುರೇಶ(43)ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 25ಲಕ್ಷ ರೂ.ವೌಲ್ಯದ 40ಗ್ರಾಂ ತೂಕದ ವಜ್ರ, 700ಗ್ರಾಂ ತೂಕದ ಚಿನ್ನಾಭರಣ, ಪಲ್ಸರ್ ಬೈಕ್ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ಸಿದ್ದ ಕಳೆದ 3ವರ್ಷಗಳಿಂದ ಮನೆ ದರೋಡೆ ಕೃತ್ಯದಲ್ಲಿ ತೊಡಗಿದ್ದು, 2015ರಲ್ಲಿ ಮೈಕೋ ಲೇಔಟ್ನಲ್ಲಿ ಕಳ್ಳತನ ಕೃತ್ಯವೆಸಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.
ಎರಡನೆ ಆರೋಪಿ ಸತ್ಯ ಕಳ್ಳತನವೆಸಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದನು. ಜೈಲಿನಲ್ಲಿ ಶಿಕ್ಷೆ ವೇಳೆ ಆರೋಪಿ ಸಿದ್ದನ ಪರಿಚಯವಾಗಿ ಇಬ್ಬರು ಸೇರಿ ಕೃತ್ಯಗಳನ್ನು ಎಸಗುತ್ತಿದ್ದರು. ಆರೋಪಿಗಳು ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಉತ್ತರಹಳ್ಳಿಯ ಬಾಬು ಹಾಗೂ ಸುರೇಶ್ಗೆ ಮಾರಾಟ ಮಾಡುತ್ತಿದ್ದರು ಎಂದು ಎಸಿಪಿ ಶ್ರೀನಿವಾಸ್ ತಿಳಿಸಿದರು.