ದಾವಣಗೆರೆ : ರಾಷ್ಟ್ರೀಯ ಭಾವೈಕತೆ ಶಿಬಿರ

ದಾವಣಗೆರೆ,ಮಾ.25:ದಾವಣಗೆರೆ ಶಿವಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವೈಕತೆ ಶಿಬಿರವನ್ನು ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿ ಬಿ.ಪಿ. ವೀರಭದ್ರಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂತಹ ಶಿಬಿರಗಳು ಕೇವಲ ಯಾವುದೇ ಒಂದು ಸೀಮಿತ ಸಮುದಾಯ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿದ ಏಕೈಕ ರಾಷ್ಟ್ರ. ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಸಾಮಾಜಿಕ ಮೌಲ್ಯ ತಿಳಿಸಿ ಬೆಳಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೇ, ಶಿಕ್ಷಣ, ಸಮಾನತೆ, ಸ್ವಾತ್ರಂತ್ರ್ಯದ ಪ್ರವೃತ್ತಿ ತಿಳಿಸುತ್ತವೆ ಎಂದರು.
ರಾಜ್ಯ ಎನ್ಎಸ್ಎಸ್ ನಿರ್ದೇಶಕ ಡಿ. ಕಾರ್ತಿಗೇಯನ್ ಮಾತನಾಡಿ, ಭಾರತ ದೇಶವು ವಿವಿಧ ವಿಚಾರಗಳಲ್ಲಿ ಇತರೆ ದೇಶಗಳಿಗೆ ಮಾದರಿಯಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಕಲಿತು ಬೇರೆಯವರಿಗೆ ಕಲಿಸುವುದು ಮುಖ್ಯ ಉದ್ದೇಶ. ಇಂತಹ ಶಿಬಿರಗಳಿಗೆ ಭಾಗವಹಿಸಿದ ನಂತರ ಹಲವಾರು ಅವಕಾಶಗಳು ವಿದ್ಯಾರ್ಥಿಗಳಿಗೆ ದೊರಕುತ್ತವೆ. ಇಲ್ಲಿ ಯಾವುದೇ ರೀತಿಯಾಗಿ ರಾಜಕೀಯದ ಹಸ್ತಕ್ಷೇಪವಿರುವುದಿಲ್ಲ. ಕೇವಲ ಸಾಮಾಜಿಕ ಕಳಕಳಿ ಅಡಗಿರುತ್ತದೆ. ಇದು ಕೇವಲ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಸೀಮಿತವಾಗಿರದೆ ಹಲವಾರು ಪ್ರಕೃತಿ ವಿಕೋಪಗಳ ಸಂದಂರ್ಭ ಭಾಗವಹಿಸುವ ಮುಖಾಂತರ ಸಹಾಯ ಮಾಡುತ್ತಿದೆ ಎಂದರು.
ದಾವಣಗೆರೆ ವಿವಿಯ ಪರೀಕ್ಷಾಂಗ ಸಚಿವ ಪ್ರೋ. ಗಂಗಾನಾಯ್ಕ್ ಮಾತನಾಡಿ, ಇಂತಹ ಶಿಬಿರಗಳು ಸಾಮಾಜಿಕ ಸೇವೆಯನ್ನು ತಮ್ಮಲ್ಲಿ ಮೈಗೂಡಿಸುತ್ತವೆ. ಆದರಿಂದ ಸ್ವಾರ್ಥ ಮನೋಭಾವನೆಯು ನಿಮ್ಮಲ್ಲಿ ದೂರವಾಗಿ ಸಾಮಾಜಿಕ ಹಿತದೃಷ್ಠಿಯ ಮತ್ತು ಮಾನವಿಯತೆಯಿಂದ ಇಂತಹ ಶಿಬಿರಗಳು ಅಗತ್ಯವಾಗಿದೆ ಎಂದರು.
ಪ್ರೋ.ಬಿ. ಮಧುಸೂದನ್, ಬಿ.ಎಸ್. ಪ್ರದೀಪ್, ದಾವಿವಿಯ ದೈಹಿಕ ಶಿಕ್ಷಣ ನಿದೇಶಕ ರಾಜ್ಕುಮಾರ್, ಪತ್ರಿಕೊದ್ಯಮ ವಿಭಾಗದ ಬಸಯ್ಯ ಹೊಸುರ್ಮಠ್, ವಿನಯ್ ಎಮ್ ಮತ್ತಿತರರಿದ್ದರು.







