ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ವಿಫಲ : ನಟಿ ಖುಷ್ಬೂ
![ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ವಿಫಲ : ನಟಿ ಖುಷ್ಬೂ ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ವಿಫಲ : ನಟಿ ಖುಷ್ಬೂ](https://www.varthabharati.in/sites/default/files/images/articles/2018/03/26/25Cbp5.jpg)
ಅಮೃತ ಗಂಗೆ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಖ್ಯಾತ ಬಹುಭಾಷಾ ನಟಿ ಖುಷ್ಬೂ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ,ಮಾ.26: ಶಾಸಕ ಡಾ.ಕೆ.ಸುಧಾಕರ್ ನೇತೃತ್ವದ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನಿಂದ ನಗರದ 3, 13, 16, 18 ಹಾಗೂ 19ನೇ ವಾರ್ಡ್ಗಳಲ್ಲಿ ನಿರ್ಮಿಸಿರುವ ಅಮೃತಗಂಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾಂಗ್ರೆಸ್ ಪಕ್ಷದ ವಕ್ತಾರೆ ಹಾಗೂ ಬಹುಭಾಷಾ ನಟಿ ಖುಷ್ಬೂ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ಖುಷ್ಬೂ, ಪ್ರಧಾನಿ ಮೋದಿ ಅವರು ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಕಳೆದ ಮೂರುವರೆ ವರ್ಷದ ಆಡಳಿತ ಅವಧಿಯಲ್ಲಿ ಈಡೇರಿಸುವಲ್ಲಿ ವಿಫಲರಾಗಿದ್ದು, ಪ್ರಸ್ತುತ ದೇಶದಲ್ಲಿ ಮೋದಿ ಹವಾ ಕುಸಿಯ ತೊಡಗಿದ್ದು, ಇದಕ್ಕೆ ಆಡಳಿತರೂಢ ಎನ್ಡಿಎ ಮಿತ್ರ ಪಕ್ಷಗಳಲ್ಲಿ ಕಾಣಿಸಿಕೊಂಡಿರುವ ಒಡಕು ಸಾಕ್ಷಿಯಾಗಿದೆ ಎಂದು ಹೇಳಿದರು.
ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಜೊತೆಗೆ ಉತ್ತಮ ಆಡಳಿತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಡಾ.ಕೆ.ಸುಧಾಕರ್ ಕಳೆದ 10 ವರ್ಷಗಳಿಂದ ತಮ್ಮ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು, ಬಡವರು, ರೈತರು, ಕಾರ್ಮಿಕ ಏಳಿಗೆಗಾಗಿ ಅನೇಕ ಸೇವೆಗಳನ್ನು ಒದಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ ಎಂದ ಅವರು, ಪ್ರತಿಯೊಬ್ಬರು ಮಿತವಾಗಿ ನೀರು ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ನಗರದ ಕಂದವಾರ ಬಾಗಿಲಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಳವಡಿಸಲಾಗಿದ್ದ ನಾಮಫಲಕಗಳನ್ನು ಕೆಲವರು ತೆರವುಗೊಳಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾಮ ಫಲಕಗಳನ್ನು ತೆರವುಗೊಳಿಸಬಹುದು, ಆದರೆ ಜನರ ಮನಸ್ಸಿನಲ್ಲಿ ಇರುವ ನನ್ನ ಹೆಸರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಬರಪೀಡಿತ ಜಿಲ್ಲೆಯಲ್ಲಿ ಈಗಾಗಲೇ 1,200 ಅಡಿಗಳಷ್ಟು ಅಂತರ ಜಲ ಕುಸಿದು ನೀರಿನಲ್ಲಿ ಪ್ಲೋರೋಸಿಸ್ ಸಮಸ್ಯೆ ಹೆಚ್ಚಾಗಿ ಅದೇ ನೀರನ್ನು ಸೇವಿಸಿ ಅನೇಕ ರೋಗರುಜನಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಒದಗಿಸುವ ದೃಷ್ಠಿಯಿಂದ ಅಮೃತ ಗಂಗೆ ಹೆಸರಿನಲ್ಲಿ ಟ್ರಸ್ಟ್ ವತಿಯಿಂದ ಈಗಾಗಲೇ ಸುಮಾರು 20 ಘಟಕಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಜೊತೆಗೆ ಗ್ರಾಮಾಂತರ ಪ್ರದೇಶದಲ್ಲಿ 153 ಕ್ಕೂ ಹೆಚ್ಚು ಶುದ್ದ ನೀರಿನ ಘಟಕಗಳನ್ನು ಸರ್ಕಾರದಿಂದ ನಿರ್ಮಿಸಿ ಚಾಲನೆ ನೀಡಲಾಗಿದೆ ಎಂದರು.
ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ನಗರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಸದಸ್ಯರಾದ ಭಾರತಿ, ನಾಗರತ್ನ ಯತೀಶ್, ಜಯಮ್ಮ, ಸುಬ್ರಮಣ್ಯಾಚಾರಿ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಮುಖಂಡರಾದ ರಾಮಕುಮಾರ್, ಮೊಬೈಲ್ ಬಾಬು, ಅಪ್ಪಾಲು ಮಂಜುನಾಥ, ತಾಪಂ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಮೋಹನ್, ನ್ಯಾತಪ್ಪ, ವೆಂಕಟೇಶ್, ನರಸಿಂಹಮೂರ್ತಿ, ಮಿಲ್ಟನ್ ವೆಂಕಟೇಶ್ ಇದ್ದರು.