ಹಾಸನ: ಎ.2 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜೆಡಿಎಸ್ ಬೃಹತ್ ಸಮಾವೇಶ; ಹೆಚ್.ಡಿ. ರೇವಣ್ಣ
ಹಾಸನ,ಮಾ.26: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎಪ್ರಿಲ್ 2 ರಂದು ಜೆಡಿಎಸ್ ಪಕ್ಷದ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ. ಹೆಚ್.ಡಿ. ಕುಮಾರಸ್ವಾಮಿ, ಸಿಂಧ್ಯಾ ಹಾಗೂ ಹಾಲಿ ಮತ್ತು ಮಾಜಿ ಎಲ್ಲಾ ಶಾಸಕರು, ಜಿಪಂ, ತಾಪಂ ಅಧ್ಯಕ್ಷರು, ಸದಸ್ಯರು ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶವು ಅಂದು ಸಂಜೆ 4 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿ ಜೆಡಿಎಸ್ ವಿರುದ್ದ ಮಾಡಿರುವ ಆರೋಪಗಳಿಗೆ ಈ ಸಮಾವೇಶದಲ್ಲಿ ಉತ್ತರ ನೀಡುಲಾಗುವುದು. 5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಏನು ಸಾಧನೆ ಮಾಡಿದೆ ಎಂಬುದನ್ನು ಸಹ ವಿವರಿಸುತ್ತೇನೆಂದು ಹೇಳಿದರು.
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಟೀಕಿಸಿದ್ದ ರಾಹುಲ್ ವಿರುದ್ಧ ಕಿಡಿ ಕಾರಿದ ರೇವಣ್ಣ, ರಾಹುಲ್ ಗಾಂಧಿಯಿಂದ ದೇವೇಗೌಡರು ಕಲಿಯುವುದೇನು ಇಲ್ಲ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಸ್ತೆಯಲ್ಲಿ ಮತ ಕೇಳುವ ಸ್ಥಿತಿ ಬಂದಿದ್ದು, ಅವರ ಸ್ಥಿತಿ ಕಂಡು ಮರಕ ಉಂಟಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರಜ್ಚಲ್ ರೇವಣ್ಣ ಕುರಿತು ಜಮೀರ್ ಅಹಮದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ನಮ್ಮ ಅಣ್ಣ ತಮ್ಮಂದಿರ ನಡುವೆ ಹೊಡೆದಾಟ ತರುವುದು ಅವರ ಉದ್ದೇಶ. ಆದರೆ ಆ ಉದ್ದೇಶ ಈಡೇರುವುದಿಲ್ಲ. ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ದೇವೇಗೌಡರ ಬಳಿ ಮಾತನಾಡಿದ್ದು, ಗೌಡರ ಮಾತು ಮೀರುವುದಿಲ್ಲವೆಂದು ಭರವಸೆ ನೀಡಿದ್ದಾರೆ ಎಂದರು.
ತನ್ನ ಕ್ಷೇತ್ರದಲ್ಲಿ ದುಡ್ಡು ಹೊಡೆದುಕೊಂಡು ರಾಜಕಾರಣ ಮಾಡಲು ಬಂದಿರುವ ವ್ಯಕ್ತಿಗಳಿಗೆ ನಾನು ಹೆದರುವುದಿಲ್ಲ. ಯಾರು ಎಷ್ಟೇ ಬಾಡೂಟ ಮಾಡಿಸಿದರೂ ನಾನು ಕೇರ್ ಮಾಡುವುದಿಲ್ಲ. ಇಂತದ್ದಕ್ಕೆಲ್ಲಾ ನಾನು ಕೇರ್ ಮಾಡುವುದಿಲ್ಲ. ನಾನು ಸ್ವಾತಿ ನಕ್ಷತ್ರ, ನನಗೆ ಯಾರಾದರೂ ಮಾಟ, ಮಂತ್ರ ಮಾಡಲು ಮುಂದಾದರೆ ಅದು ಅವರಿಗೆ ವಾಪಸ್ ಆಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶಾಸಕ ಹೆಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ತಾಲೂಕು ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ್, ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಇತರರು ಇದ್ದರು.