90 ಸನ್ಯಾಸಿಗಳಿಗೆ ದೀಕ್ಷೆ: ರಾಮ್ದೇವ್
ಹರಿದ್ವಾರ, ಮಾ.26: ಭಾರತವನ್ನು ಆಧ್ಯಾತ್ಮಿಕ ಮಹಾಶಕ್ತ ರಾಷ್ಟ್ರವನ್ನಾಗಿ ಮಾಡುವ ಧ್ಯೇಯದೊಂದಿಗೆ ರಾಮನವಮಿಯಂದು 90 ಸನ್ಯಾಸಿಗಳಿಗೆ ದೀಕ್ಷೆ ನೀಡಲಾಗಿದೆ ಎಂದು ಯೋಗಗುರು ರಾಮ್ದೇವ್ ತಿಳಿಸಿದ್ದಾರೆ.
ರಾಮ್ದೇವ್ ನಗರದ ಗಂಗಾನದಿಯ ತಟದಲ್ಲಿ 51 ಸನ್ಯಾಸಿಗಳಿಗೆ ಹಾಗೂ 39 ಸನ್ಯಾಸಿನಿಯರಿಗೆ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೀಕ್ಷೆ ನೀಡಲಾಗಿದೆ. ರಾಷ್ಟ್ರದ ಸೇವೆ ಹಾಗೂ ಸನ್ಯಾಸತ್ವಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವುದಕ್ಕಿಂತ ಮಹದಾನಂದಕರ ವಿಧಾನ ಇನ್ನೊಂದಿಲ್ಲ ಎಂದು ರಾಮ್ದೇವ್ ಹೇಳಿದ್ದಾರೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾ.21ರಿಂದಲೇ ಪತಂಜಲಿ ಪರಿಸರದಲ್ಲಿರುವ ಋಷಿಗ್ರಾಮದಲ್ಲಿ ಮರದಿಂದ ನಿರ್ಮಿಸಿದ ಯಜ್ಞಶಾಲೆಯಲ್ಲಿ ಹವನ ಮತ್ತು ಯಜ್ಞಗಳನ್ನು ನಡೆಸಲಾಗಿದೆ. ದೀಕ್ಷೆ ಪಡೆದವರಲ್ಲಿ ಬ್ರಾಹ್ಮಣರು, ವೈಶ್ಯರು ಹಾಗೂ ಶೂದ್ರರು ಸೇರಿದಂತೆ ವಿವಿಧ ವರ್ಗದವರಿದ್ದರು. ಇವರಿಗೆ ವೇದ ಹಾಗೂ ಉಪನಿಷದ್ ಶಿಕ್ಷಣ ನೀಡಲಾಗಿದೆ. ಇವರಲ್ಲಿ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪದವಿ ಪಡೆದವರೂ ಸೇರಿದ್ದಾರೆ. 2050ರೊಳಗೆ ದೇಶವನ್ನು ಆಧ್ಯಾತ್ಮಿಕ ಸೂಪರ್ಶಕ್ತಿಯನ್ನಾಗಿ ಮಾಡುವ ಧ್ಯೇಯದೊಂದಿಗೆ ಒಟ್ಟು 1,000 ಸನ್ಯಾಸಿಗಳಿಗೆ ದೀಕ್ಷೆ ನೀಡಿ ಅವರನ್ನು ದೇಶಸೇವೆಗೆ ಅರ್ಪಿಸುವ ಗುರಿ ಹೊಂದಲಾಗಿದೆ ಎಂದು ರಾಮ್ದೇವ್ ತಿಳಿಸಿದ್ದಾರೆ.