ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲು: ಕೇಂದ್ರ ಸಚಿವ ಚೌಬೆ ಪುತ್ರ ಅರಿಜಿತ್
ಪಾಟ್ನ, ಮಾ.26: ಇತ್ತೀಚೆಗೆ ಭಗಲ್ಪುರದಲ್ಲಿ ನಡೆದ ಕೋಮು ಗಲಭೆ ಘಟನೆಯಲ್ಲಿ ರಾಜಕೀಯ ಒತ್ತಡದ ಕಾರಣ ತನ್ನ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆಯವರ ಪುತ್ರ ಅರಿಜಿತ್ ಶಾಶ್ವತ್ ಹೇಳಿದ್ದಾರೆ.
ಈ ಘಟನೆಯಲ್ಲಿ ಒಂದು ಸಮುದಾಯದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಇನ್ನೂ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಈ ದುಷ್ಕರ್ಮಿಗಳು ಪೊಲೀಸರತ್ತ ಬಾಂಬ್ ಎಸೆದು ಗುಂಡು ಹಾರಿಸಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಗಂಗಾ ನದಿಯಲ್ಲಿ ಪವಿತ್ರಸ್ನಾನ ಮುಗಿಸಿ ವಾಪಸಾಗುತ್ತಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಆದರೂ ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ದೂರಿದರು.
ಮಾರ್ಚ್ 17ರಂದು ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರೂ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಶ್ವತ್ ಹಾಗೂ ಇತರ 9 ಮಂದಿ ವಿರುದ್ಧ ಪೊಲೀಸರು ಶನಿವಾರ ಬಂಧನ ವಾರಂಟ್ ಜಾರಿಗೊಳಿಸಿದ್ದರು.
ನಾಥ್ನಗರ ಠಾಣಾಧಿಕಾರಿ ಹಾಗೂ ಉಪ ಠಾಣಾಧಿಕಾರಿ ಭಗಲ್ಪುರ ಶಾಸಕರ ಆಣತಿಯಂತೆ ನಡೆದುಕೊಂಡಿರುವುದು ಹಿಂಸಾಚಾರ ಭುಗಿಲೇಳಲು ಕಾರಣವಾಗಿದೆ ಎಂದು ಶಾಶ್ವತ್ ಆರೋಪಿಸಿದರು. 2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಗಲ್ಪುರದಲ್ಲಿ ಶಾಶ್ವತ್ ಕಾಂಗ್ರೆಸ್ ಅಭ್ಯರ್ಥಿ ಅಜೀತ್ ಶರ್ಮ ವಿರುದ್ಧ ಸೋಲುಂಡಿದ್ದಾರೆ.