ಬಿಜೆಪಿ ಶಾಸಕರಿಗೆ ಅನುದಾನ ನೀಡಲು ಸರಕಾರ ನಿರ್ಲಕ್ಷ್ಯ: ಆರೋಪ
ಸಿ.ಟಿ.ರವಿ ನೇತೃತ್ವದಲ್ಲಿ ಪಾದಯಾತ್ರೆ
ಚಿಕ್ಕಮಗಳೂರು, ಮಾ,26: ರಾಜ್ಯ ಸರಕಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಶಾಸಕರುಗಳಿರುವ ಕ್ಷೇತ್ರಗಳ ಅಭಿವೃದ್ಧಿ ಕಡೆಗಣಿಸಿದ್ದು, ಬಿಜೆಪಿ ಶಾಸಕರುಗಳಿಗೆ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಇದರ ವಿರುದ್ಧ ಜನ ಜಾಗೃತಿ ಮೂಡಿಸುವ ಸಲುವಾಗಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ನಾಲ್ಕು ದಿಕ್ಕುಗಳಿಂದ ಮಾ.27 ಮತ್ತು ಮಾ.28ರಂದು ಪಾದಯಾತ್ರೆ ನಡೆಸಲಾಗುವುದು ಎಂದು ಪಕ್ಷದ ವಕ್ತಾರ ವರಸಿದ್ದಿ ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾ.27ರಂದು ಬೆಳಗ್ಗೆ 9ಕ್ಕೆ ಕ್ಷೇತ್ರದ 4 ದಿಕ್ಕುಗಳಿಂದ ಪಾದಾಯತ್ರೆ ಹೊರಡಲಿದ್ದು, ತಾಲೂಕಿನ ಚಿಕ್ಕದೇವನೂರು ಗ್ರಾಮದಿಂದ ಶಾಸಕ ಸಿ.ಟಿ.ರವಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಿ.ಪಂ.ಸದಸ್ಯ ವಿಜಯ್ಕುಮಾರ್,ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ರವಿ, ಮಂಡಲ ಹಿಂದುಳಿದ ವರ್ಗ ಮೋರ್ಚಾದ ಲೋಕೇಶ್ ಮತ್ತಿತರ ಮುಖಂಡರು ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಸ್.ಬಿದರೆ ಗ್ರಾಮದಿಂದ ಹೊರಡುವ ಪಾದಯಾತ್ರೆಯಲ್ಲಿ ಕಲ್ಮರುಡಪ್ಪ, ಮಂಡಲ ಅಧ್ಯಕ್ಷ ಸೋಮಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ಹೊಡಲಿದೆ. ಕೆ.ಬಿ.ಹಾಳ್ನಿಂದ ಜಿ.ಪಂ.ಸದಸ್ಯ ರವೀಂದ್ರ ಬೆಳವಾಡಿ, ತಾ.ಪಂ. ಅಧ್ಯಕ್ಷರಾದ ಮಹೇಶ್, ಎಪಿಎಮ್ಸಿ ಅಧ್ಯಕ್ಷ ಬಸವರಾಜ್ ಸಾದರಹಳ್ಳ, ಮಾಜಿ ಜಿ.ಪಂ.ಸದಸ್ಯ ನಿರಂಜನ್, ತಾ.ಪಂ.ಸದಸ್ಯರಾದ ಶುಭಾ ಸತ್ಯಮೂರ್ತಿ ನೇತೃತ್ವ ವಹಿಸಲಿದ್ದಾರೆ. ಮತ್ತು ತೊಗರಿಹಂಕಲ್ನಿಂದ ಜಿ.ಪಂ.ಸದಸ್ಯರಾದ ಜಸಂತಾ ಅನಿಲ್ ಕುಮಾರ್, ಶಿವಕುಮಾರ್, ಜೆ.ಡಿ.ಲೋಕೇಶ್, ಶಿವರಾಜ್, ತಾ.ಪಂ.ಸದಸ್ಯರಾದ ದಾಕ್ಷಾಯಿಣಿ ಪೂರ್ಣೇಶ್ ಪಾದಯಾತ್ರೆ ಮುಂದಾಳತ್ವ ವಹಿಸಲಿದ್ದಾರೆಂದು ತಿಳಿಸಿರುವ ಅವರು, ಈ ಪಾದಯಾತ್ರೆ ತಾಲೂಕಿನ ಇಂದಾವರ, ಹಿರೇಕೊಳಲೆ, ಮೂಗ್ತಿಹಳ್ಳಿ ಕಡೆಯಿಂದ ಮಾ.28ರಂದು ಚಿಕ್ಕಮಗಳೂರು ನಗರಕ್ಕೆ ಪ್ರವೇಶಿಸಿ ಹನುಮಂತಪ್ಪ ಸರ್ಕಲ್ನಲ್ಲಿ ಜಮಾವಣೆಗೊಳ್ಳಲಿದೆ. ನಂತರ ಅಂದೇ ವಿಜಯಪುರ ಗಣಪತಿ ಪೆಂಡಾಲ್ನಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಸಾಗುವ ಗ್ರಾಮಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಜಿಲ್ಲೆಯನ್ನು ಕಡೆಗಣಿಸಿರುವ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದ ಅವರು, ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿರುವುದು, ಒತ್ತುವರಿ ಸಮಸ್ಯೆ ಬಗೆಹರಿಸದಿರುವುದು, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಆಯವ್ಯಯದಲ್ಲಿ ಹಣ ಮೀಸಲಿಡದಿರುವುದು, ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸದಿರುವುದು, ಜಿಲ್ಲೆಯ ಬಯಲುಸೀಮೆ ಭಾಗದ 63 ಕೆರೆಗಳಿಗೆ ನೀರು ಹರಿಸುವ ಯೋಜನೆ ಅನುಮೋದನೆ ನೀಡದಿರುವುದು, ಹಿಂದೂ ಯುವಕರ ಹತ್ಯೆ, ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸದಿರುವುದು, ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೇಸೇತರ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿರುವುದು, ದತ್ತ ಜಯಂತಿ ಸಂದರ್ಭದಲ್ಲಿ ಒಂದು ಕೋಮಿನ ಕೆಲವು ಯುವಕರು ಪೆಟ್ರೋಲ್ ಬಾಂಬ್ ತಯಾರಿಕರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ್ಕುಮಾರ್ ಮತ್ತು ಕಾಂಗ್ರೆಸ್ ಮುಖಂಡರು ಬೆಂಬಲ ನೀಡಿರುವಂತಹ ವಿಷಯಗಳನ್ನು ಪಾದಯಾತ್ರೆಯಲ್ಲಿ ಪ್ರತೀ ಹಳ್ಳಿಗಳ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ







