ಭೋಪಾಲ್: ಮರಳು ಮಾಫಿಯಾಗೆ ಪತ್ರಕರ್ತ ಬಲಿ
ಭೋಪಾಲ್, ಮಾ. 27: ಅಕ್ರಮ ಮರಳುಗಾರಿಕೆ ಮತ್ತು ಪೊಲೀಸರ ನಡುವಿನ ಅಕ್ರಮ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದ ಪ್ರಾದೇಶಿಕ ಸುದ್ದಿವಾಹಿನಿಯ ಪತ್ರಕರ್ತನನ್ನು ಲಾರಿ ಹಾಯಿಸಿ ಹತ್ಯೆ ಮಾಡಿರುವ ಪ್ರಕರಣ ಭಿಂಡ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆಗೆ ಗುರಿ ಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರಾದ ಪತ್ರಕರ್ತ ಸಂದೀಪ್ ಶರ್ಮಾ (35) ನಾಲ್ಕು ತಿಂಗಳ ಹಿಂದೆ ಕುಟುಕು ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಜೀವ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನದಲ್ಲಿ ಶರ್ಮಾ ಹೋಗುತ್ತಿದ್ದಾಗ, ಲಾರಿ ಬಡಿದು ಅವರು ಸ್ಥಳದಲ್ಲೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆಗ್ರಹಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚವ್ಹಾಣ್, ಪತ್ರಕರ್ತರ ಸುರಕ್ಷೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಮರಳು ಮಾಫಿಯಾ ಜತೆ ಕೈಜೋಡಿಸಿದ್ದಾರೆ ಎಂದು ಶರ್ಮಾ ಈ ಹಿಂದೆ ವರದಿ ಮಾಡಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಈ ಸಂಬಂಧ ಸಂಭಾಷಣೆ ನಡೆಸುತ್ತಿರುವ ಆಡಿಯೊ ಕ್ಲಿಪ್ ಪ್ರಸಾರವಾದ ಬಳಿಕ ಆ ಅಧಿಕಾರಿಯನ್ನು ವರ್ಗಾಯಿಸಲಾಗಿತ್ತು.
ಕೊತ್ವಾಲಿ ಪೊಲೀಸ್ ಠಾಣೆಯ ಸನಿಹದಲ್ಲೇ ಪತ್ರಕರ್ತ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿಯಿಂದ ಢಿಕ್ಕಿ ಹೊಡೆಸಲಾಗಿದೆ ಮತ್ತು ಲಾರಿಯನ್ನು ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು ಹೋಗಲಾಗಿದೆ. ಸಿಸಿಟಿವಿ ವೀಡಿಯೊ ತುಣುಕಿನಲ್ಲಿ ಘಟನೆ ದಾಖಲಾಗಿದೆ.
ಶರ್ಮಾ ಸಾವು, ಸಹ ಪತ್ರಕರ್ತರನ್ನು ರೊಚ್ಚಿಗೆಬ್ಬಿಸಿದೆ. ಠಾಣೆಯ ಪಕ್ಕದಲ್ಲೇ ಘಟನೆ ನಡೆದಿದ್ದರೂ, ಪೊಲೀಸರು ತಕ್ಷಣ ಸ್ಪಂದಿಸಲಿಲ್ಲ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH:Chilling CCTV footage of moment when Journalist Sandeep Sharma was run over by a truck in Bhind. He had been reporting on the sand mafia and had earlier complained to Police about threat to his life. #MadhyaPradesh pic.twitter.com/LZxNuTLyap
— ANI (@ANI) March 26, 2018
Bhind: Driver of the truck which hit the journalist reporting on sand mafia yesterday, arrested. SS Kushwaha,TI,City Kotwali,says, 'person has admitted that he was driving the vehicle at time of the incident. SIT team is questioning & doing investigation'#MadhyaPradesh pic.twitter.com/ViGStCcVOq
— ANI (@ANI) March 26, 2018