ಬಿಜೆಡಿ ಯುವ ಘಟಕದ ನಾಯಕನ ಗುಂಡಿಕ್ಕಿ ಹತ್ಯೆ
ಭುಬನೇಶ್ವರ್,ಮಾ.27 : ಧೆನ್ಕನಲ್ ಜಿಲ್ಲೆಯ ಆಡಳಿತ ಬಿಜು ಜನತಾ ದಳದ ಯುವ ಘಟಕದ ಅಧ್ಯಕ್ಷ ಜಶೋಬಂತ್ ಪರಿದಾ ಎಂಬವರನ್ನು ಸೋಮವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪರಿದಾ ಅವರು ಸಂಚರಿಸುತ್ತಿದ್ದ ಎಸ್ಯುವಿ ಮೇಲೆ ಕಾಮಾಕ್ಷ್ಯನಗರ್ ಎಂಬಲ್ಲಿ ದುಷ್ಕರ್ಮಿಗಳು ಮೊದಲು ಗುಂಡಿನ ದಾಳಿ ನಡೆಸಿದ್ದರು. ಪರಿದಾ ತಮ್ಮ ಕಾರಿನಿಂದ ಕೆಳಗಿಳಿಯುತ್ತಲೇ ಅವರತ್ತ ಗುಂಡು ಹಾರಿಸಲಾಯಿತು.
ಪರಿದಾ ಅವರನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಅವರು ದಾರಿ ಮಧ್ಯದಲ್ಲಿಯೇ ಕೊನೆಯುಸಿರೆಳೆದರು. ದುಷ್ಕರ್ಮಿಗಳು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಬೊಲೆರೋ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು ರಾಜಕೀಯ ದ್ವೇಷದ ಕೃತ್ಯವಾಗಿರಲಿಕ್ಕಿಲ್ಲ ಬದಲಾಗಿ ವೈಯಕ್ತಿಕ ಅಥವಾ ವ್ಯಾವಹಾರಿಕ ದ್ವೇಷದ ಕೃತ್ಯವಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯವಾಗಿರಬೇಕೆಂದೂ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ 2014ರಲ್ಲಿ ಅವರ ಮೇಲೆ ಕೊಲೆಯತ್ನ ನಡೆದಿತ್ತಾದರೂ ಆ ಸಂದರ್ಭ ಅವರು ಬಚಾವಾಗಿದ್ದರು.
ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.