ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ‘ನಮ್ಮೂರು- ನೆಕ್ಕಿಲಾಡಿ’
ಶಾಂತಿನಗರ ಜನತಾ ಕಾಲನಿ ರಸ್ತೆ ಕಾಮಗಾರಿಯಲ್ಲಿ ತಾರತಮ್ಯ ಆರೋಪ
.jpg)
ಉಪ್ಪಿನಂಗಡಿ, ಮಾ. 27: ಎಸ್ಸಿ-ಎಸ್ಟಿ ಕಾಲನಿ ಅಭಿವೃದ್ಧಿ ಯೋಜನೆಯಡಿ ಅನುದಾನ ಬಂದರೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ-ಎಸ್ಟಿ ಮನೆಗಳುಳ್ಳ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸದೇ ಬೇರೆ ಕಡೆ ಕಾಮಗಾರಿ ನಡೆಸುವ ಮೂಲಕ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಜನತಾ ಕಾಲನಿ ನಿವಾಸಿಗಳು ಬೇರೆಡೆ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ನಿಲ್ಲಿಸಿ, ಈ ಬಗ್ಗೆ ನ್ಯಾಯ ದೊರಕಿಸಿಕೊಡಲು ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಗೆ ಮನವಿ ನೀಡಿದ್ದು, ಈ ಸಂದರ್ಭ ಮಧ್ಯಪ್ರವೇಶಿಸಿದ ಸಂಸ್ಥೆಯು ಇದನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಜನತಾ ಕಾಲನಿಗೆ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಎಸ್ಸಿ, ಎಸ್ಟಿ ಕಾಲನಿ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 10 ಲಕ್ಷ ರೂ. ಅನುದಾನವೊದಗಿಸಿದ್ದರು. ಈ ಜನತಾ ಕಾಲನಿಯಲ್ಲಿ ಮೂರು ಅಡ್ಡರಸ್ತೆಗಳು ಬರುತ್ತಿದ್ದು, ಮೊದಲನೇ ಅಡ್ಡರಸ್ತೆಯಲ್ಲಿ 1 ಪರಿಶಿಷ್ಟ ಜಾತಿಗೆ ಸೇರಿದ ಒಂದು ಕುಟುಂಬವಿದ್ದರೆ, ಎರಡನೇ ಅಡ್ಡ ರಸ್ತೆಯಲ್ಲಿ ಎರಡು ಹಾಗೂ ಮೂರನೇ ಅಡ್ಡ ರಸ್ತೆಯಲ್ಲಿ ಸುಮಾರು ಏಳು ಕುಟುಂಬಗಳು ಬರುತ್ತವೆ. ಈ 10 ಲಕ್ಷ ರೂಪಾಯಿ ಅನುದಾನದಲ್ಲಿ ಒಟ್ಟು 175 ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇದರ ಗುತ್ತಿಗೆದಾರರು ಒಂದನೇ ಅಡ್ಡ ರಸ್ತೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಈ ನಡುವೆ ಮೂರನೇ ಅಡ್ಡ ರಸ್ತೆಯಲ್ಲಿ ಪಂಚಾಯತ್ನ ಕುಡಿಯುವ ನೀರಿನ ಪೈಪ್ಲೈನ್ ಇರುವುದರಿಂದ ಈ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸುವುದಿಲ್ಲ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಆರೋಪಿಸಿದ ಈ ಭಾಗದ ನಿವಾಸಿಗಳು ಉಳಿದೆರಡು ರಸ್ತೆಗಳಿಗೆ ಕಾಮಗಾರಿ ನಡೆಸಲು ತಡೆಯೊಡ್ಡಿದ್ದರು. ಬಳಿಕ ಈ ಬಗ್ಗೆ ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಗೆ ಮನವಿ ನೀಡಿದ ಅಲ್ಲಿನ ಸ್ಥಳೀಯರು, ಎಸ್ಸಿ, ಎಸ್ಟಿಗಳ ಜಾಸ್ತಿ ಮನೆಗಳಿರುವುದು ಮೂರನೇ ಅಡ್ಡರಸ್ತೆಯಲ್ಲಿ. ಆದರೆ ಇಲ್ಲಿ ರಸ್ತೆಯಡಿ ಪಂಚಾಯತ್ನ ಕುಡಿಯುವ ನೀರಿನ ಪೈಪ್ಗಳಿರುವುದರಿಂದ ಅದನ್ನು ತೆಗೆದು ರಸ್ತೆಯಾದ ಬಳಿಕ ಪುನರ್ ಅಳವಡಿಸಲು ಸುಮಾರು 30 ಸಾವಿರ ರೂಪಾಯಿ ಖರ್ಚು ಬರಲಿದ್ದು, ಅದಕ್ಕೆ ಇದರಲ್ಲಿ ಪ್ರತ್ಯೇಕ ಅನುದಾನವಿಲ್ಲವೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಪೈಪ್ಗಳನ್ನು ತೆರವುಗೊಳಿಸಿ ಮತ್ತೆ ಅಳವಡಿಸಲು ನಮ್ಮಲ್ಲಿ ಹಣವಿಲ್ಲವೆಂದು ಗ್ರಾಮ ಪಂಚಾಯತ್ ಹೇಳುತ್ತಿದೆ. ಇದರಿಂದ ನಮಗೆ ಕಾಂಕ್ರೀಟ್ ರಸ್ತೆಯ ಭಾಗ್ಯ ದೊರಕದಂತಾಗಿದೆ ಎಂದು ಅವಲತ್ತುಕೊಂಡಿದ್ದರಲ್ಲದೆ, ಇಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯು ಮಧ್ಯಪ್ರವೇಶಿಸಿ ನಮಗೆ ಸಮಾನ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿದ್ದರು.
ಮಂಗಳವಾರ ಬೆಳಗ್ಗೆ ‘ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಸದಸ್ಯರು ಅಲ್ಲಿನ ನೈಜತೆಯ ಬಗ್ಗೆ ಪರಿಶೀಲಿಸಿದಾರಲ್ಲದೆ, ಗುತ್ತಿಗೆದಾರರನ್ನು ಕರೆದು ಈ ಬಗ್ಗೆ ಮಾತನಾಡಿದರು. ಈ ಸಂಧರ್ಭ ಇಲ್ಲಿನ ಮೂರು ರಸ್ತೆಗಳಿಗೂ ಕಾಂಕ್ರೀಟ್ ಕಾಮಗಾರಿ ನಡೆಸುವುದಾಗಿ ತಿಳಿಸಿದ ಗುತ್ತಿಗೆದಾರರು, ಇಲ್ಲಿನ ಮೂರನೇ ಅಡ್ಡರಸ್ತೆಯಲ್ಲಿರುವ ಕುಡಿಯುವ ನೀರಿನ ಪೈಪ್ಗಳನ್ನು ತನ್ನದೇ ಖರ್ಚಿನಲ್ಲಿ ಮರು ಜೋಡಿಸಿ ಕೊಡುವುದಾಗಿ ಭರವಸೆ ನೀಡಿದರು. ಬಳಿಕ ಸ್ಥಳೀಯರು ಕಾಮಗಾರಿಗೆ ಅವಕಾಶ ನೀಡಿದರು.
ಈ ಸಂದರ್ಭ ‘ನಮ್ಮೂರು-ನೆಕ್ಕಿಲಾಡಿ’ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಉಪಾಧ್ಯಕ್ಷರಾದ ರೂಪೇಶ್ ರೈ ಅಲಿಮಾರ್, ಅನಿ ಮಿನೇಜಸ್, ಸಂಘ ಟನಾ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತ್ಯವತಿ ಪೂಂಜಾ, ಜೊತೆ ಸಂಘಟನಾ ಕಾರ್ಯದರ್ಶಿ ಅಮಿತಾ ಹರೀಶ್, ಸದಸ್ಯೆ ಜಯಶೀಲಾ, ಸ್ಥಳೀಯರಾದ ಸತೀಶ್, ಮೋಹನ್ದಾಸ್, ರಾಧಾ, ಸುಶೀಲಾ, ಖತೀಜ, ಮುನೀರ್, ಹಮೀದ್, ಪುಷ್ಪಾವತಿ, ವೇದಾವತಿ, ಶೋಭಾ ಮತ್ತಿತರರು ಇದ್ದರು.
ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ: ಜತೀಂದ್ರ ಶೆಟ್ಟಿ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ‘ನಮ್ಮೂರು- ನೆಕ್ಕಿಲಾಡಿ’ಯ ಅಧ್ಯಕ್ಷ ಜತೀಂದ್ರ ಶೆಟ್ಟಿ ನೆಕ್ಕಿಲಾಡಿ, ಶಾಂತಿನಗರ ಜನತಾ ಕಾಲನಿಯ ರಸ್ತೆ ಕಾಂಕ್ರೀಟ್ ಕಾಮಗಾರಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಬಗ್ಗೆ ಸ್ಥಳೀಯರು ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಗೆ ದೂರು ನೀಡಿ, ಸಂಸ್ಥೆಯು ಮಧ್ಯಪ್ರವೇಶಿಸಿ ಇದನ್ನು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ ಸ್ಥಳಕ್ಕೆ ತೆರಳಿ ನಾವು ಪರಿಶೀಲಿಸಿದ್ದು, ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇವೆ. 175 ಮೀಟರ್ ಕಾಂಕ್ರೀಟ್ ಕಾಮಗಾರಿಯಲ್ಲಿ ಮೊದಲನೇ ಅಡ್ಡ ರಸ್ತೆಗೆ 53 ಮೀಟರ್, ಎರಡನೇ ಹಾಗೂ ಮೂರನೇ ಅಡ್ಡರಸ್ತೆಗಳಿಗೆ ತಲಾ 61 ಮೀಟರ್ನಂತೆ ಕಾಂಕ್ರೀಟ್ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಮೂರನೇ ಅಡ್ಡ ರಸ್ತೆಯಲ್ಲಿರುವ ಕುಡಿಯುವ ನೀರಿನ ಪೈಪ್ಗಳನ್ನು ತೆಗೆದು ಕಾಮಗಾರಿ ನಡೆದ ಬಳಿಕ ತಮ್ಮದೇ ಖರ್ಚಿನಲ್ಲಿ ಮರು ಜೋಡಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಆದ್ದರಿಂದ ಇದು ಸೌಹಾರ್ದಯುತವಾಗಿ ಬಗೆಹರಿದಿದ್ದು, ಎರಡು ದಿನಗಳಿಂದ ಕಾಮಗಾರಿಗೆ ತಡೆಯೊಡ್ಡಿದ್ದ ಸ್ಥಳೀಯರು ಕಾಮಗಾರಿ ಆರಂಭಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿದಿದೆ: ಸ್ಥಳೀಯರು
ಇಲ್ಲಿ ಎಸ್ಸಿ-ಎಸ್ಟಿಗಳ ಹೆಚ್ಚಿನ ಮನೆಗಳಿರುವುದು ಮೂರನೇ ಅಡ್ಡ ರಸ್ತೆಯಲ್ಲಿ. ಆದರೆ ಇಲ್ಲಿ ಪೈಪ್ ಇದೆ ಎಂಬ ಕಾರಣಕ್ಕೆ ಕಾಂಕ್ರೀಟ್ ಕಾಮಗಾರಿ ನಡೆಸಲು ಗುತ್ತಿಗೆದಾರರು ಒಪ್ಪುತ್ತಿಲ್ಲ ಎಂಬ ಮಾಹಿತಿ ನಮಗೆ ಬಂದಿತ್ತು. 34ನೇ ನೆಕ್ಕಿಲಾಡಿ ಗ್ರಾ.ಪಂ.ನವರು ಕೂಡಾ ಪೈಪ್ಲೈನ್ ಮರು ಜೋಡಣೆಗೆ ಹಣ ಒದಗಿಸಲು ಸಾಧ್ಯವಿಲ್ಲ ಎಂದಿದ್ದರು. ಈ ರಸ್ತೆಗೆ ಆಗ ಬೇಕಾದ ಕಾಂಕ್ರೀಟ್ ಕಾಮಗಾರಿಯನ್ನು ಬೇರೆಕಡೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಇದರಿಂದಾಗಿ ನಾವು ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ಮೊರೆ ಹೋದೆವು. ಅವರು ಇದನ್ನು ಗುತ್ತಿಗೆದಾರರಲ್ಲಿ ಮಾತನಾಡಿ ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ. ಸಾಮಾಜಿಕ ಕೆಲಸಗಳಿಗೆ ತಕ್ಷಣ ಸ್ಪಂದಿಸುವ ‘ನಮ್ಮೂರು- ನೆಕ್ಕಿಲಾಡಿ’ಗೆ ನಮ್ಮೆಲ್ಲರ ಅಭಿನಂದನೆಗಳು.
- ಕುಶಾಲಪ್ಪ, ಸ್ಥಳೀಯರು







