ಮೈಸೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
![ಮೈಸೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಮೈಸೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ](https://www.varthabharati.in/sites/default/files/images/articles/2018/03/27/Farmer Protest Photos.jpg)
ಮೈಸೂರು,ಮಾ.27: ಹೆಚ್ಚು ಇಳುವರಿ ಸಕ್ಕರೆ ಬರುವ ಕಬ್ಬಿಗೆ ಹೆಚ್ಚು ಬೆಲೆ ನೀಡಬೇಕಾಗಿದ್ದರೂ ರೈತರಿಗೆ ಹಣ ಪಾವತಿಸದೇ ಅನ್ಯಾಯವೆಸಗಲಾಗುತ್ತಿದೆ. ರೈತರಿಗೆ ನ್ಯಾಯ ದೊರಕಿಸಿಕೊಡಿ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸಕ್ಕರೆ ಇಳುವರಿ ಶೇ.11 ಇದ್ದರೂ ಕೂಡ ಕಬ್ಬಿಗೆ ನ್ಯಾಯಯುತ ದರ ನೀಡದೇ ಬಣ್ಣಾರಿ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗಳು ರೈತಿಗೆ ದ್ರೋಹ ಬಗೆಯುತ್ತಿವೆ. ಮುಖ್ಯಮಂತ್ರಿಗಳು ರೈತ ದ್ರೋಹಿಯಾಗಿದ್ದಾರೆ. ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಇದ್ದರೂ ರೈತರಿಗೆ ನ್ಯಾಯ ಕೊಡಿಸದೇ ಕಳೆದ ವರ್ಷಕ್ಕಿಂತ ಕಡಿಮೆ ಕಬ್ಬಿನ ದರ ನೀಡುತ್ತಿದ್ದರೂ ನಿರ್ಲಕ್ಷ್ಯಿಸಿ ರೈತದ್ರೋಹಿಯಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳಿಂದ ಕಬಿನಿ ಅಚ್ಚುಕಟ್ಟು ಬೆಳೆಗಾರರಿಗೆ ನೀರು ಹರಿಸದೇ ಬೆಳೆ ನಷ್ಟಪರಿಹಾರವನ್ನೂ ಕೂಡ ನೀಡದೇ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ದೇಶದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ರೈತರನ್ನು ಪೊಲೀಸರು ನಿಯಂತ್ರಿಸಿದರು.
ಪ್ರತಿಭಟನೆಯಲ್ಲಿ ಅತ್ತಳ್ಳಿ ದೇವರಾಜು, ಮರೀಗೌಡ, ನರಸಿಂಹಯ್ಯ, ಮಹದೇವ, ಮಲ್ಲಣ್ಣ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.