ಸಚಿನ್, ದ್ರಾವಿಡ್ ಬಾಲ್ ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದು ನಿಮಗೆ ಗೊತ್ತೇ ?

ಚೆಂಡು ವಿರೂಪಗೊಳಿಸುವ ಕೃತ್ಯ ಕ್ರಿಕೆಟ್ ಆಟದಷ್ಟೇ ಹಳೆಯದು ಎಂಬ ವಾಸ್ತವದ ನಡುವೆಯೂ ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಮೋಸದಾಟ ನಡೆಸಿದ್ದನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಒಪ್ಪಿಕೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ವಿರುದ್ಧ ವಾಕ್ಪ್ರಹಾರ ನಡೆಯುತ್ತಿದೆ.
ಒಂದೇ ಭಿನ್ನತೆ ಎಂದರೆ ಆಸ್ಟ್ರೇಲಿಯನ್ ಆಟಗಾರರು ಈ ಬಾರಿ ಸಿಕ್ಕಿಬಿದ್ದಿದ್ದಾರೆ. ಈ ಮೂಲಕ ತಮ್ಮ ರಾಷ್ಟ್ರೀಯ ತಂಡವನ್ನು ಬೆಂಬಲಿಸುವ ಅಭಿಮಾನಿಗಳನ್ನು ಅವಮಾನಿಸಿದ್ದಾರೆ. ಮತ್ತು ಇದನ್ನು ವಂಚನೆ ಅಥವಾ ಮೋಸದಾಟಕ್ಕಿಂತಲೂ ದೊಡ್ಡದು ಎಂಬಂತೆ ಮಾಡಿದ್ದಾರೆ. ಚೆಂಡು ವಿರೂಪಗೊಳಿಸಿದ ಖ್ಯಾತನಾಮರ ಪಟ್ಟಿಯಲ್ಲಿ ವಾಸ್ತವವಾಗಿ ಸ್ವೀವ್ ಸ್ಮಿತ್ ಮಾತ್ರ ಇರುವುದಲ್ಲ. ಕ್ರಿಕೆಟ್ ಸ್ಟಾರ್ ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಕೂಡಾ ಚೆಂಡು ವಿರೂಪಗೊಳಿಸುವ ಬಲೆಗೆ ಬಿದ್ದಿದ್ದಾರೆ.
ಲೆದರ್ ಬಾಲ್ನ ಒಂದು ಬದಿಯನ್ನು ಇನ್ನಷ್ಟು ಒರಟು ಮಾಡಲು ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ಇದು ಬೌಲರ್ ಗೆ ಹೆಚ್ಚು ಸ್ವಿಂಗ್ ಪಡೆಯಲು ನೆರವಾಗುತ್ತದೆ. ಹಿಂದೆ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸಿದ ಆಟಗಾರರಲ್ಲಿ ಸ್ಟಾರ್ ಆಟಗಾರರೂ ಸೇರಿದ್ದಾರೆ. ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸಿದ ಅಗ್ರಗಣ್ಯ ಆಟಗಾರರ ಪ್ರಕರಣಗಳು ಇಲ್ಲಿವೆ.
ಸಚಿನ್ ತೆಂಡೂಲ್ಕರ್

ಅತಿಯಾಗಿ ಮನವಿ ಸಲ್ಲಿಸಿದ ಕಾರಣಕ್ಕೆ ಐದು ಮಂದಿ ಭಾರತೀಯ ಕ್ರಿಕೆಟರ್ ಗಳಿಗೆ ಶಿಕ್ಷೆ ವಿಧಿಸಿದಾಗ ಮತ್ತು ಪೋರ್ಟ್ ಎಲಿಜಬೆತ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕಾಗಿ ತೆಂಡೂಲ್ಕರ್ ಗೆ ನಿಷೇಧ ಹೇರಿದಾಗ ಮ್ಯಾಚ್ ರೆಫ್ರಿ ಮೈಕ್ ಡೆನಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಅತ್ಯುನ್ನತ ಸ್ಥಾನದಲ್ಲಿದ್ದರು. ತೆಂಡೂಲ್ಕರ್ ಅವರು ಚೆಂಡಿನ ಸೀಮ್ ಸ್ವಚ್ಛಗೊಳಿಸುತ್ತಿರುವುದನ್ನು ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಆದರೆ ಅಂಪೈರ್ ಗಳು ಇದನ್ನು ಗಮನಿಸದ ಕಾರಣ, ಇದು ಚೆಂಡಿನ ಸ್ಥಿತಿಯನ್ನು ತಿದ್ದಿದ ನಿಬಂಧನೆಗಳಡಿಯಲ್ಲಿ ಬಂದಿದೆ. ಈ ಪ್ರಕರಣ ಭಾರತಕ್ಕೆ ಗಂಭೀರ ತಿರುಗುಬಾಣವಾಗಿ ಪರಿಣಮಿಸಿತು ಮತ್ತು ಕ್ಷಿಪ್ರವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಈ ಘಟನೆಯ ಬಗ್ಗೆ ವಿಸ್ತೃತವಾದ ತನಿಖೆ ನಡೆಸಿದ ಐಸಿಸಿ, ತೆಂಡೂಲ್ಕರ್ ಅವರಿಗೆ ವಿಧಿಸಿದ್ದ ಒಂದು ಪಂದ್ಯದ ಅಮಾನತು ಶಿಕ್ಷೆಯನ್ನು ರದ್ದು ಮಾಡಿತು.
ರಾಹುಲ್ ದ್ರಾವಿಡ್

ಸ್ಥಿರವಾದ ಇನಿಂಗ್ಸ್ ಕಟ್ಟುವ ಕೌಶಲ ಹೊಂದಿದ್ದ ರಾಹುಲ್ ದ್ರಾವಿಡ್, ಕ್ರಿಕಟ್ ಜಗತ್ತಿನಲ್ಲಿ ಗೋಡೆ ಎಂದೇ ಹೆಸರುವಾಸಿ. ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯ ಆಡುವ ವೇಳೆ ಚೆಂಡಿಗೆ ಎಂಜಲು ಉಜ್ಜುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಂತೆ ಭಾರತೀಯ ತಂಡದ ನಾಯಕ ದ್ರಾವಿಡ್ ಅವರು ಉದ್ದೇಶಪೂರ್ವಕವಾಗಿ ಚೆಂಡಿಗೆ ಎಂಜಲು ಹಚ್ಚಿದ್ದಾರೆ ಎಂದು ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ್ ಹೇಳಿದ್ದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದರು. ಈ ತಪ್ಪಿಗಾಗಿ ಅವರಿಗೆ ಪಂದ್ಯದ ಶುಲ್ಕದ ಶೇಕಡ 50ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಯಿತು.
ನ್ಯೂಜಿಲೆಂಡ್ನ ಕ್ರಿಸ್ ಪ್ರಿಂಜೆಲ್
ಈ ಮಧ್ಯಮವೇಗದ ಬೌಲರ್, ಚೆಂಡು ವಿರೂಪಗೊಳಿಸಿದ್ದನ್ನು ಒಪ್ಪಿಕೊಂಡರೂ, ಯಾವುದೇ ಶಿಕ್ಷೆ ಇಲ್ಲದೇ ಪಾರಾಗಿದ್ದರು. ಪಾಕಿಸ್ತಾನದ ಕರಾಚಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಕೆಲವೇ ಸಮಯದಲ್ಲಿ ಚೆಂಡು ವಿರೂಪಗೊಳಿಸಿದ್ದನ್ನು ಅವರು ಒಪ್ಪಿಕೊಂಡಿದ್ದರು.
ಟೆಲಿವಿಷನ್ ತಂತ್ರಜ್ಞಾನ ಇಂದು ಹೈಟೆಕ್ ಆಗಿದ್ದು, ಮೈದಾನದಲ್ಲಿ ಪ್ರತಿ ಆಟಗಾರರ ಚಲನ ವಲನಗಳ ಮೇಲೆ ನಿಕಟವಾಗಿ ನಿಗಾ ಇಡಬಹುದು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮ್ಯಾಚ್ರೆಫ್ರಿಗಳನ್ನು ನೇಮಕ ಮಾಡುವ ಮೊದಲು ಮೈದಾನದಲ್ಲಿದ್ದ ಅಂಪೈರ್ಗಳೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು.
ಇವರು ಜೀವನದ ಸರ್ವಶ್ರೇಷ್ಠ ಸಾಧನೆ ತೋರಿ ಫೈಸಲಾಬಾದ್ ಟೆಸ್ಟ್ ನಲ್ಲಿ ಬ್ಯಾಟ್ಸ್ ಮನ್ ಸ್ನೇಹಿ ಪಿಚ್ನಲ್ಲಿ 152 ರನ್ಗಳಿಗೆ 11 ವಿಕೆಟ್ ಪಡೆದಿದ್ದರು. ಚೆಂಡನ್ನು ತರಚಲು ಅವರು ಬಾಟಲಿಯ ಮುಚ್ಚಳ ಬಳಸಿದ್ದನ್ನು ಅವರು ಬಹಿರಂಗಪಡಿಸಿದ್ದರು. ಪಾಕಿಸ್ತಾನಿ ಬೌಲರ್ ಗಳು ಕೂಡಾ ಹೀಗೆ ಮಾಡುತ್ತಿದ್ದಾರೆ ಎಂಬ ನಂಬಿಕೆಯಿಂದ ಚೆಂಡನ್ನು ವಿರೂಪಗೊಳಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ದಿವಂಗತ ಮಾರ್ಟಿನ್ ಕ್ರೋವ್ ಅವರು ಆ ಬಳಿಕ, ಪಾಕಿಸ್ತಾನ ತಂಡ ಉತ್ತಮ ತಂಡ ಎನ್ನುವುದನ್ನು ಒಪ್ಪಿಕೊಳ್ಳಲು ತಾವು ಸಿದ್ಧ ಎಂದು ಹೇಳಿಕೆ ನೀಡಿದ್ದರು. "ಆದರೆ ಅವರು ಚೆಂಡನ್ನು ಏನು ಮಾಡುತ್ತಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದರು.
ಇಂಗ್ಲೆಂಡಿನ ಮೈಕೆಲ್ ಆರ್ಥರ್ಟನ್

ಇಂಗ್ಲೆಂಡ್ ತಂಡದ ನಾಯಕ ಪಿಚ್ನಿಂದ ಕೆಸರು ತೆಗೆದುಕೊಂಡು ಬೇಬಿನಲ್ಲಿ ಹಾಕಿಕೊಂಡು ಬಳಿಕ ಇದನ್ನು ಚೆಂಡಿಗೆ ಉಜ್ಜುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಆದರೆ ಐಸಿಸಿ ಮ್ಯಾಚ್ರೆಫ್ರಿ ಪೀಟರ್ ಬರ್ಗ್ ಅವರು ಆರ್ಥರ್ಟನ್ಗೆ ಯಾವುದೇ ದಂಡ ವಿಧಿಸಲಿಲ್ಲ ಅಥವಾ ಖಂಡಿಸಲಿಲ್ಲ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆರ್ಥರ್ಟನ್ಗೆ ದಂಡ ವಿಧಿಸಿತು.
ಇದು ಅವರವ ವೃತ್ತಿಜೀವನದ ಕರಾಳ ಅಧ್ಯಾಯ. ಆದರೆ ಈ ತಿಂಗಳು ಎರಡು ಟೆಸ್ಟ್ ಪಂದ್ಯಕ್ಕಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡ ಇಂಗ್ಲೆಂಡ್ ತಂಡದ ಜತೆ ಅವರು ವಿಶ್ಲೇಷಣೆಕಾರರಾಗಿ ಬಂದಿದ್ದು, ಆಸ್ಟ್ರೇಲಿಯಾ ತಂಡದ ನಾಯಕನ ಪ್ರಸ್ತುತ ಘಟನೆ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಸ್ಮಿತ್ ಅವರಿಗೆ ಆಜೀವ ನಿಷೇಧ ಹೇರಬೇಕು ಎಂಬ ಆಗ್ರಹಗಳು ಹಾಸ್ಯಾಸ್ಪದ ಎಂದು ಹೇಳಿದ್ದರು.
ಪಾಕಿಸ್ತಾನದ ವಕಾರ್ ಯೂನಸ್

ಇಂಗ್ಲೆಡ್ ವಿರುದ್ಧದ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ ಬಗ್ಗೆ ಬ್ರಿಟಿಷ್ ಮಾಧ್ಯಮಗಳು ಮೊಟ್ಟಮೊದಲು ಆರೋಪಿಸಿದ ಎಂಟು ವರ್ಷಗಳ ಬಳಿಕ, ದಂಡ ಮತ್ತು ತಪ್ಪಿಗಾಗಿ ಅಮಾನತುಗೊಂಡ ಮೊಟ್ಟಮೊದಲ ಪಾಕಿಸ್ತಾನಿ ಬೌಲರ್ ಎಂಬ ಕುಖ್ಯಾತಿಗೆ ಯೂನಸ್ ಪಾತ್ರರಾಗಿದ್ದರು. ನ್ಯೂಜಿಲೆಂಡ್ ಮ್ಯಾಚ್ರೆಫ್ರಿ ಜಾನ್ ರೀಡ್ ವಕಾರ್ ಗೆ ದಂಡ ವಿಧಿಸಿದ್ದರು. ಶ್ರೀಲಂಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಪಂದ್ಯದ ಸಂಭಾವನೆಯ ಶೇಕಡ 50ರಷ್ಟು ದಂಡ ವಿಧಿಸಲಾಗಿತ್ತು. ಸಿಂಗರ್ ಕಪ್ ಏಕದಿನ ಪಂದ್ಯದ ವೇಳೆ ಪಾಕಿಸ್ತಾನಿ ತಂಡದ ನಾಯಕ ಮೊಯಿನ್ ಖಾನ್ ಮತ್ತು ಆಲ್ರೌಂಡರ್ ಅಝರ್ ಮೆಹಮೂದ್ ಅವರಿಗೆ ಪಂದ್ಯದ ಸಂಭಾವನೆಯ ಶೇಕಡ 30ರಷ್ಟು ದಂಡ ವಿಧಿಸಲಾಯಿತು.
ಟಿವಿ ದೃಶ್ಯಾವಳಿಯ ತುಣುಕುಗಳನ್ನು ಪರಿಶೀಲಿಸಿದ ಬಳಿಕ ರೀಡ್ ಈ ಕ್ರಮ ಕೂಗೊಂಡಿದ್ದರು. ಚೆಂಡಿನ ಒಂದು ಬದಿಯನ್ನು ಬೆರಳಿನ ಉಗುರಿನಿಂದ ಯೂನಸ್ ಕೆರೆಯುತ್ತಿದ್ದುದು ಸ್ಪಷ್ಟವಾಗಿ ಕಂಡುಬಂದಿತ್ತು.
ಇದಕ್ಕೂ ಮುನ್ನ ಶ್ರೀಲಂಕಾ ಜತೆಗಿನ ಟೆಸ್ಟ್ ಪಂದ್ಯದ ವೇಳೆ ಯೂನಸ್ ಚೆಂಡು ವಿರೂಪಗೊಳಿಸುವ ಸಂದರ್ಭ ರೀಡ್ ಎಚ್ಚರಿಕೆ ನೀಡಿದ್ದರಿಂದ ವಕಾರ್ ಗೆ ಶಿಕ್ಷೆ ತಪ್ಪಿತ್ತು. ಚೆಂಡಿಗೆ ಅಂಟಿದ್ದ ಕೊಳಕನ್ನು ತೆಗೆಯಲು ಯೂನಸ್ ಹಾಗೆ ಮಾಡಿದ್ದರು ಎಂದು ತಂಡದ ಸದಸ್ಯರು ವಾದ ಮಂಡಿಸಿದ್ದರು.
ಪಾಕಿಸ್ತಾನದ ಶೋಯಿಬ್ ಅಖ್ತರ್

ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೆಂಡಿನ ಮೇಲ್ಮೈ ಕೆರೆದ ಕಾರಣಕ್ಕಾಗಿ, ಬೆಂಕಿ ಚೆಂಡು ಎಂದೇ ಹೆಸರಾಗಿದ್ದ ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಅವರಿಗೆ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು.
ಬಳಿಕ ಅಖ್ತರ್ ತಮ್ಮ "ಕಾಂಟ್ರವರ್ಶಿಯಲಿ ಯುವರ್ಸ್" ಕೃತಿಯಲ್ಲಿ, ಹತಾಶರಾಗಿ ಚೆಂಡನ್ನು ವಿರೂಪಗೊಳಿಸಿದ್ದಾಗಿ ಒಪ್ಪಿಕೊಂಡಿದ್ದರು. ತೀರಾ ನಿಧಾನಗತಿಯ ದಂಬುಲ್ಲಾ ವಿಕೆಟ್ನಲ್ಲಿ ಅತಿಯಾದ ಸೆಖೆ ಹಾಗೂ ತೇವಾಂಶದ ಕಾರಣದಿಂದ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದರು.
ಇದು ನಿಯಮಬಾಹಿರ ಹಾಗೂ ಇದು ಹೆಮ್ಮೆಪಡುವಂಥದ್ದಲ್ಲ ಎನ್ನುವುದು ತಿಳಿದಿತ್ತು ಎಂದೂ ಹೇಳಿಕೊಂಡಿದ್ದಾರೆ. ತಾವು ಆಡುತ್ತಿದ್ದ ಅವಧಿಯಲ್ಲಿ ಹಲವು ಬಾರಿ ಹೀಗೆ ಚೆಂಡು ವಿರೂಪಗೊಳಿಸಿದ್ದಾಗಿ ಒಪ್ಪಿಕೊಂಡಿದ್ದರು. "ಅದಕ್ಕೆ ನಾನು ನೆರವಾಗುತ್ತಿಲ್ಲ. ಚೆಂಡಿನಿಂದ ನಾನು ಏನಾದರೂ ಮಾಡಲೇಬೇಕಿತ್ತು. ಇದು ದೊಡ್ಡ ಸದ್ದೆಬ್ಬಿಸುತ್ತದೆ ಎನ್ನುವುದು ನನಗೆ ಗೊತ್ತು. ಆದರೆ ನಾನು ಈ ಬಗ್ಗೆ ಸುಳ್ಳು ಹೇಳುವುದಿಲ್ಲ"
ಪಾಕಿಸ್ತಾನಿ ತಂಡ

ಓವಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ್ದಕ್ಕಾಗಿ ದಂಡನೆಗೆ ಒಳಗಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ತಂಡ ಆಡಲು ನಿರಾಕರಿಸಿದ್ದು, ಒಂದು ವಿವಾದಾತ್ಮಕ ಅಧ್ಯಾಯ. ಅಂಪೈರ್ ಗಳಾದ ಡೆರೆಲ್ ಹೇರ್ ಮತ್ತು ಬಿಲ್ಲಿ ಡೋಕ್ಟ್ರೋವ್, ಇಂಗ್ಲೆಂಡ್ ಜಯ ಗಳಿಸಿದೆ ಎಂದು ಘೋಷಿಸಿದರು. ಇಬ್ಬರೂ ಅಂಪೈರ್ ಗಳು ಚೆಂಡಿನ ಸ್ಥಿತಿ ಬಗ್ಗೆ ಪರಸ್ಪರ ಚರ್ಚಿಸಿ, ಚೆಂಡು ಬದಲಿಸಿ, ಐದು ಪೆನಾಲ್ಟಿ ರನ್ಗಳನ್ನು ಇಂಗ್ಲೆಂಡಿಗೆ ನೀಡಿದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು.
ಚಹಾ ವಿರಾಮದವರೆಗೆ ಯಾವುದೇ ಪ್ರತಿಭಟನೆ ಇಲ್ಲದೇ ಪಂದ್ಯ ಮುಂದುವರಿಯಿತು. ಮಧ್ಯಂತರದ ಅವಧಿಯಲ್ಲಿ, ಪಾಕಿಸ್ತಾನಿ ಆಟಗಾರರು ದಂಡನೆ ಬಗ್ಗೆ ಚರ್ಚಿಸಿದರು ಹಾಗೂ ಚೆಂಡನ್ನು ವಿರೂಪಗೊಳಿಸಿಲ್ಲ ಎಂದು ಭಾವಿಸಿದ್ದರು. ಆದ್ದರಿಂದ ಕ್ಷೇತ್ರರಕ್ಷಣೆಗಾಗಿ ಮೈದಾನಕ್ಕೆ ಇಳಿಯಲು ನಿರಾಕರಿಸಿದರು. ಈ ಮಧ್ಯೆ 15 ನಿಮಿಷಗಳ ಕಾಲ ಅಂಪೈರ್ ಗಳು ಕಾದು, ಇಂಗ್ಲೆಂಡ್ ಪರವಾಗಿ ಫಲಿತಾಂಶ ಘೋಷಿಸಿದರು. ಪಾಕಿಸ್ತಾನಿ ಆಟಗಾರರು ಮೈದಾನಕ್ಕೆ ವಾಪಸ್ಸಾಗಲು ಒಪ್ಪಿಕೊಳ್ಳುವ ವೇಳೆಗೆ, ಪಂದ್ಯ ಮುಗಿದಿದೆ ಎಂದು ಅಂಪೈರ್ ಗಗಳು ಘೋಷಿಸಿದರು.
ಅಂಪೈರ್ ಹೇರ್ ಅವರು ಚೆಂಡು ವಿರೂಪದ ಬಗ್ಗೆ ವಿವರಗಳನ್ನು ನೀಡಲಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಇಂಝಮಾಮ್ ಉಲ್ ಹಕ್ ಹೇಳಿದ್ದರು. ಜೆಂಟಲ್ಮನ್ ಗೇಮ್ ಎನ್ನಲಾದ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿ ಫಲಿತಾಂಶ ಘೋಷಿಸಿದ್ದು ಇದೇ ಮೊದಲು.
ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್

ಕೇಪ್ಟೌನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೆಂಡಿನ ಮೇಲೆ ಬೂಟಿನ ಮೊಳೆ ಚುಚ್ಚುವಂತೆ ನಿಂತಾಗ ಇಂಗ್ಲೆಂಡಿನ ವೇಗದ ಬೌಲರ್ ಸ್ಟುವರ್ಡ್ ಬ್ರಾಡ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾಗಿದ್ದರು. ಚೆಂಡಿನ ಮೇಲೆ ನಿಲ್ಲುವ ಮುನ್ನ ಬ್ರಾಡ್ ಉರುಳುತ್ತಿದ್ದ ಚೆಂಡನ್ನು ಪಾದದಿಂದ ನಿಲ್ಲಿಸಿದ್ದರು. ತೀರಾ ದಗೆಯ ಕಾರಣದಿಂದ ಚೆಂಡು ಹೆಕ್ಕಲು ಉದಾಸೀನವಾಗಿ ಹೀಗೆ ಮಾಡಿದ್ದಾಗಿ ಬ್ರಾಡ್ ವಾದಿಸಿದ್ದರು. ಚೆಂಡು ವಿರೂಪಗೊಳಿಸಿದ ಆರೋಪವನ್ನು ನಿರಾಕರಿಸಿದ್ದರು.
ದಕ್ಷಿಣ ಆಫ್ರಿಕಾ ಆಟಗಾರರ ಆರೋಪದ ಹೊರತಾಗಿಯೂ ಔಪಚಾರಿಕವಾಗಿ ಯಾವ ದೂರನ್ನೂ ದಾಖಲಿಸಲಿಲ್ಲ. ವೇಗದ ಬೌಲರ್ ಮಾಡಿದ್ದು ತಪ್ಪು ಎಂದು ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದರು.
ಶಾಹೀದ್ ಅಫ್ರೀದಿ

ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ಪಾಕಿಸ್ತಾನ ತಂಡ ಎರಡು ವಿಕೆಟ್ಗಳಿಂದ ಸೋತ ಪಂದ್ಯದಲ್ಲಿ ಎರಡು ಬಾರಿ ಚೆಂಡನ್ನು ಕಚ್ಚಿದಂತೆ ಕಂಡುಬಂದ ಹಿನ್ನೆಲೆಯಲ್ಲಿ ಶಾಹೀದ್ ಅಫ್ರೀದಿ ಅವರಿಗೆ ಎರಡು ಏಕದಿನ ಪಂದ್ಯಗಳ ನಿಷೇಧ ಹೇರಲಾಯಿತು. ಟಿವಿ ಅಂಪೈರ್ ಈ ಬಗ್ಗೆ ಮೈದಾನದಲ್ಲಿದ್ದ ಅಂಪೈರ್ ಗಳಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಅಫ್ರೀದಿ ಜತೆ ಚರ್ಚಿಸಿ, ಚೆಂಡು ಬದಲಿಸಲಾಗಿತ್ತು. ಪಂದ್ಯದ ಬಳಿಕ ಮ್ಯಾಚ್ರೆಫ್ರಿ ರಂಜನ್ ಮುದುಗಲೆ ಕರೆಸಿಕೊಂಡಾಗ, ಆಫ್ರೀದಿ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದರು ಹಾಗೂ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಆ ಬಳಿಕ ಅಫ್ರೀದಿ, "ವಿಶ್ವದಲ್ಲಿ ಯಾವ ತಂಡ ಕೂಡಾ ಚೆಂಡನ್ನು ವಿರೂಪಗೊಳಿಸದೇ ಇರುವುದಿಲ್ಲ. ಆದರೆ ನನ್ನ ವಿಧಾನ ತಪ್ಪು; ನನಗೆ ಮುಜುಗರವಾಗುತ್ತಿದೆ. ಅದನ್ನು ಮಾಡಬಾರದಿತ್ತು. ನಾವು ಪಂದ್ಯವನ್ನು ಗೆಲ್ಲಬೇಕೆಂಬ ಸಲುವಾಗಿ ಹಾಗೆ ಮಾಡಿದೆ. ಆದರೆ ಇದು ಗೆಲ್ಲಲು ತಪ್ಪು ಮಾರ್ಗ" ಎಂದು ಬಣ್ಣಿಸಿದ್ದರು.
ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಿಗೆ ಪಂದ್ಯದ ಸಂಭಾವನೆಯ ಶೇಕಡ 100ರಷ್ಟು ದಂಡ ವಿಧಿಸಲಾಯಿತು ಹಾಗೂ ಮೂರು ಡೀಮೆರಿಟ್ ಪಾಯಿಂಟ್ ನೀಡಲಾಯಿತು. ಟೆಲಿವಿಷನ್ ದೃಶ್ಯಾವಳಿ ತುಣುಕಿನಲ್ಲಿ ಡುಪ್ಲೆಸಿಸ್, ಕ್ಯಾಂಡಿ ಸವಿಯುತ್ತಾ, ಬೆರಳನ್ನು ಬಾಯಿಗೆ ಇಟ್ಟು, ಎಂಜಲನ್ನು ಚೆಂಡಿಗೆ ಹೊಳಪು ನೀಡುವ ಸಲುವಾಗಿ ಬಳಸುತ್ತಿದ್ದುದು ಕಂಡುಬಂದಿತ್ತು. ಇದಕ್ಕೂ ಮುನ್ನ 2013ರಲ್ಲಿ ತಮ್ಮ ಪ್ಯಾಂಟ್ ಝಿಪ್ಗೆ ಬಾಲನ್ನು ಉಜ್ಜಿ ವಿರೂಪಗೊಳಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.







