ಶಿವಮೊಗ್ಗ: ನೀತಿ ಸಂಹಿತೆ ಜಾರಿ ಬೆನ್ನಲ್ಲೆ ರಾಜಕೀಯ ಪಕ್ಷಗಳ ಫ್ಲೆಕ್ಸ್ ತೆರವು; ಚುನಾಯಿತ ಪ್ರತಿನಿಧಿಗಳ ವಾಹನ ವಶಕ್ಕೆ
![ಶಿವಮೊಗ್ಗ: ನೀತಿ ಸಂಹಿತೆ ಜಾರಿ ಬೆನ್ನಲ್ಲೆ ರಾಜಕೀಯ ಪಕ್ಷಗಳ ಫ್ಲೆಕ್ಸ್ ತೆರವು; ಚುನಾಯಿತ ಪ್ರತಿನಿಧಿಗಳ ವಾಹನ ವಶಕ್ಕೆ ಶಿವಮೊಗ್ಗ: ನೀತಿ ಸಂಹಿತೆ ಜಾರಿ ಬೆನ್ನಲ್ಲೆ ರಾಜಕೀಯ ಪಕ್ಷಗಳ ಫ್ಲೆಕ್ಸ್ ತೆರವು; ಚುನಾಯಿತ ಪ್ರತಿನಿಧಿಗಳ ವಾಹನ ವಶಕ್ಕೆ](https://www.varthabharati.in/sites/default/files/images/articles/2018/03/27/01.jpg)
ಶಿವಮೊಗ್ಗ, ಮಾ. 27: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆ ಬೆನ್ನಲ್ಲೆ ನಗರಾದ್ಯಂತ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಫ್ಲೆಕ್ಸ್, ಬಂಟಿಂಗ್ಸ್, ಪೋಸ್ಟರ್ ಗಳ ತೆರವು ಕಾರ್ಯಾಚರಣೆಯನ್ನು ಮಂಗಳವಾರ ಮಹಾನಗರ ಪಾಲಿಕೆ ಆಡಳಿತ ಸಮರೋಪಾದಿಯಲ್ಲಿ ನಡೆಸಿತು.
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ತುಂಬಿ ತುಳುಕುತ್ತಿದ್ದ ರಾಜಕೀಯ ಪಕ್ಷಗಳ ಫ್ಲೆಕ್ಸ್-ಬಂಟಿಂಗ್ಸ್, ಪೋಸ್ಟರ್ ಗಳನ್ನು ಪಾಲಿಕೆ ಆಡಳಿತ ತೆರವುಗೊಳಿಸಿತು. ಚುನಾವಣಾ ನೀತಿ-ಸಂಹಿತೆ ಪೂರ್ಣಗೊಳ್ಳುವವರೆಗೂ ಚುನಾವಣಾ ಆಯೋಗದ ಅನುಮತಿಯಿಲ್ಲದೆ ಯಾವುದೇ ಫ್ಲೆಕ್ಸ್-ಬಂಟಿಂಗ್ಸ್ ಅಳವಡಿಕೆ ಮಾಡುವಂತಿಲ್ಲ. ಅಳವಡಿಕೆಗೆ ಆಯೋಗದ ಅನುಮತಿ ಕಡ್ಡಾಯವಾಗಿದೆ.
ವಾಹನ ವಶಕ್ಕೆ: ವಿವಿಧ ಅಧಿಕಾರಸ್ಥ ಚುನಾಯಿತ ಪ್ರತಿನಿಧಿಗಳು ಮತ್ತು ನಾಮನಿರ್ದೇಶಿತ ಸದಸ್ಯರಿಗೆ ನೀಡಲಾಗಿದ್ದ ಸರ್ಕಾರಿ ವಾಹನಗಳನ್ನು ಜಿಲ್ಲಾಡಳಿತ ತತ್ಕ್ಷಣದಿಂದಲೇ ಹಿಂದಕ್ಕೆ ಪಡೆದುಕೊಂಡಿದೆ. ಹಾಗೆಯೇ ಶಾಸಕರು, ಸಂಸದರ ಅನುದಾನದಡಿ ನಿರ್ಮಿಸಲಾಗಿರುವ ಆಟೋ, ಬಸ್, ಟ್ಯಾಕ್ಸಿ ನಿಲ್ದಾಣಗಳ ಬಳಿ ಹಾಕಿರುವ ಫಲಕಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಫಲಕಗಳಲ್ಲಿರುವ ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಮರೆಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಅನುಮತಿ ಕಡ್ಡಾಯ: ಇನ್ನು ಮುಂದೆ ರಾಜಕೀಯ ಪಕ್ಷಗಳು ಆಯೋಜಿಸುವ ಚುನಾವಣಾ ಸಂಬಂಧಿತ ಸಭೆ, ಸಮಾರಂಭಗಳಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸಂಬಂಧಿಸಿದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ. ಮತದಾರರಿಗೆ ಆಮಿಷವೊಡ್ಡುವುದಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಮಾದರಿ ನೀತಿ ಸಂಹಿತೆ ತಂಡಗಳನ್ನು ಕೂಡ ಚುನಾವಣಾ ಆಯೋಗ ರಚಿಸಿದೆ.
ಸಚಿವರಿಗೆ ತಟ್ಟಿದ ನೀತಿ-ಸಂಹಿತೆ ಎಫೆಕ್ಟ್ನ ಬಿಸಿ
ಮಂಗಳವಾರ ನಗರಕ್ಕೆ ಆಗಮಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರವರಿಗೂ ಚುನಾವಣಾ ನೀತಿ-ಸಂಹಿತೆ ಎಫೆಕ್ಟ್ ನ ಬಿಸಿ ತಟ್ಟಿತು. ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಸಚಿವರು ಆಗಮಿಸುವ ವೇಳೆಗಾಗಲೇ ಚುನಾವಣಾ ಆಯೋಗ ನೀತಿ-ಸಂಹಿತೆ ಪ್ರಕಟಿಸಿತ್ತು. ಈ ಕಾರಣದಿಂದ ಸಚಿವರನ್ನು ಬರ ಮಾಡಿಕೊಳ್ಳಲು ಹೆಲಿಪ್ಯಾಡ್ಗೆ ಬಂದಿದ್ದ ಸರ್ಕಾರಿ ಅಧಿಕಾರಿಗಳು ವಾಹನ ಸಮೇತ ಹೆಲಿಪ್ಯಾಡ್ನಿಂದ ಹಿಂದಿರುಗಿದರು. ಹಾಗೆಯೇ ಸಚಿವರನ್ನು ಆಹ್ವಾನಿಸಲು ಬಂದಿದ್ದ ಜನಪ್ರತಿನಿಧಿಗಳು ಕೂಡ ಸರ್ಕಾರಿ ವಾಹನಗಳನ್ನು ಬಿಟ್ಟು ಖಾಸಗಿ ವಾಹನಗಳಲ್ಲಿ ಹಿಂದಿರುಗುವಂತಾಯಿತು.