ದಾವಣಗೆರೆ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ರಮೇಶ್
![ದಾವಣಗೆರೆ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ರಮೇಶ್ ದಾವಣಗೆರೆ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ರಮೇಶ್](https://www.varthabharati.in/sites/default/files/images/articles/2018/03/27/10.jpg)
ದಾವಣಗೆರೆ,ಮಾ.27: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018 ರ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದ್ದು, ವೇಳಾಪಟ್ಟಿಯಂತೆ ಮೇ.12 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ.15 ಕ್ಕೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮೇ.18 ಕ್ಕೆ ಚುನಾವಣೆ ಪ್ರಕ್ರಿಯೆಗಳು ಮುಗಿಯಲಿವೆ ಎಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 27 ರಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 17 ರಿಂದ ಏಪ್ರಿಲ್ 24 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಹಾಗೂ ಏಪ್ರಿಲ್ 25 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು, ಏಪ್ರಿಲ್ 27 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಎಂದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಸರ್ಕಾರಿ, ಸಾರ್ವಜನಿಕ, ವೈಯಕ್ತಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ, ಪ್ರತಿನಿಧಿಗಳ ಮುಖ ಚಹರೆಗಳನ್ನು ತೆಗೆಯಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ವಾಹನಗಳನ್ನು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡಿದ ವಾಹನಗಳನ್ನು ವಾಪಸ್ಸು ಪಡೆಯಲು ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ 16 ಲಕ್ಷ ಮತದಾರರು ನೋಂದಾಯಿಸಿಕೊಂಡಿದ್ದು, ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. 1,904 ಮತಗಟ್ಟೆಗಳಿದ್ದು, ಹೆಚ್ಚುವರಿ 42 ಮತಗಟ್ಟೆಗಳನ್ನೊಳಗೊಂಡಂತೆ 1,946 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12,500 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲ್ಲ ಮತಗಟ್ಟೆಗಳ ಜಿಯೋ ಕೋಆರ್ಡಿನೇಟ್ಸ್ ಅನ್ನು ಶೇಖರಿಸಲಾಗಿದ್ದು, ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಅಲ್ಲದೇ ಪ್ರತಿ ಮತಗಟ್ಟೆಯ ಡಿಜಿಟಲ್ ಮ್ಯಾಪ್, ಕೀ ಮ್ಯಾಪ್, ಸೆಟ್ಲೈಟ್ ಮ್ಯಾಪ್ ಹಾಗೂ ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ.
ಮೊದಲನೇ ಹಂತದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ಗಳ ಪರಿಶೀಲನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ, ರಾಜಕೀಯ ಪಕ್ಷ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ ಚುನಾವಣಾ ಸಂಬಂಧ ದೂರು ನಿರ್ವಹಣಾ ನಿಯಂತ್ರಣ ಕೇಂದ್ರ ಸ್ಥಾಪಿಸಲಾಗಿದ್ದು, ಚುನಾವಣಾ ದೂರುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1077 ಮತ್ತು 234034 ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ಈ ಕೇಂದ್ರವು 24*7 ಕಾರ್ಯನಿರ್ವಹಿಸುತ್ತದೆ ಎಂದರು.
ಜಿಲ್ಲೆಯಲ್ಲಿ 12,875 ವಿಶೇಷಚೇತನ ಮತದಾರರರಿದ್ದು, ಅವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅವಶ್ಯವಿರುವ ವೀಲ್ಚೇರ್ ಖರೀದಿಸಲು ಸಂಬಂಧಿಸಿದ ಗ್ರಾಮಪಂಚಾಯತ್ ಗಳಿಗೆ ಸೂಚಿಸಲಾಗಿದೆ. ಹಾಗೂ ಕೆಲ ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸುವಂತೆ ಯೋಜಿಸಲಾಗಿದೆ ಎಂದರು.
ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಜಾಗೃತಿ ಸಮಿತಿ ಹಾಗೂ ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಚುನಾವಣಾ ಅಕ್ರಮಗಳ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತಗಟ್ಟೆ ಮಟ್ಟದಲ್ಲಿ ಮತಗಟ್ಟೆವಾರು 1946 ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಮೊಬೈಲ್ ನಿಷೇಧ:
ಈ ಬಾರಿಯ ಚುನಾವಣೆಯಲ್ಲಿ ವಿವಿ ಪ್ಯಾಟ್ ಬಳಕೆಯಾಗುತ್ತಿದ್ದು, ಮತದಾರರು ಚಲಾಯಿಸಿದ ಮತದ ಚಿತ್ರಣ ಪರದೆಯ ಮೇಲೆ ಮೂಡಿಬರುವುದರಿಂದ ಮತಗಟ್ಟೆಗಳ ಒಳಗೆ ಮೊಬೈಲ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಚುನಾವಣಾ ತಹಶೀಲ್ದಾರ್ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
• ಜಿಲ್ಲೆಯಲ್ಲಿ ಒಟ್ಟು ಮತದಾರರು 16,03,722
• ಪುರುಷ ಮತದಾರರು 8,11,692
• ಮಹಿಳಾ ಮತದಾರರು 7,92,30
• ವಿಶೇಷ ಚೇತನ ಮತದಾರರು 12,875
• ಒಟ್ಟು ಮತಗಟ್ಟೆಗಳು 1,946
• ಬ್ಯಾಲೆಟ್ ಯುನಿಟ್ 2,968
• ಕಂಟ್ರೋಲ್ ಯುನಿಟ್ 2,498
• ವಿವಿ ಪ್ಯಾಟ್ 2,417
• ಫ್ಲೈಯಿಂಗ್ ಸ್ಕ್ವಾಡ್ ತಂಡಗಳು 24
• ಚೆಕ್ ಪೋಸ್ಟ್ಗಳು 47
• ಮತಗಟ್ಟೆವಾರು ಜಾಗೃತಿ ಸಮಿತಿ 1946
• ಚುನಾವಣಾ ದೂರು ನಿರ್ವಹಣಾ ಹಾಗೂ ನಿಯಂತ್ರಣ ಕೇಂದ್ರದ ಸಹಾಯವಾಣಿ: 1077 ಮತ್ತು ದೂರವಾಣಿ ಸಂಖ್ಯೆ: 234034