ಬಿಜೆಪಿಗೆ ಗಂಟುಮೂಟೆ ಕಟ್ಟಲು ಇದು ಸಕಾಲ: ಮಮತಾ ಬ್ಯಾನರ್ಜಿ
ಹೊಸದಿಲ್ಲಿ, ಮಾ. 28: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳನ್ನು ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್ಡಿಎ ಮಿತ್ರಪಕ್ಷವಾಗಿರುವ ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಇದರ ಜತೆಗೆ ಬಿಜೆಪಿ ಬಗ್ಗೆ ಮುನಿಸಿಕೊಂಡಿರುವ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರನ್ನು ಕೂಡ ಬುಧವಾರ ಭೇಟಿ ಮಾಡಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತನ್ನ ವಾಸ್ತವ್ಯದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೂ ಮಮತಾ ಭೇಟಿ ಮಾಡಿದರು. ಸಂಜೆ 7 ಗಂಟೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಅವರನ್ನೂ ಭೇಟಿ ಮಾಡಲಿದ್ದಾರೆ.
"ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎನ್ನುವುದು ನಮ್ಮ ಬಯಕೆ. ಅತ್ಯಂತ ಪ್ರಬಲ ವಿರೋಧ ಪಕ್ಷವನ್ನು ನಾವು ಬಿಜೆಪಿ ವಿರುದ್ಧ ಹೋರಾಡುವ ಸಲುವಾಗಿ ರಾಜ್ಯಗಳಲ್ಲಿ ರೂಪಿಸಬೇಕು. ಇದು ನೇರ ಹೋರಾಟವಾಗಬೇಕು. ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಪ್ರಬಲರಾಗಿದ್ದರೆ, ಅವರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ನಾವು ಅವರಿಗೆ ನೆರವಾಗಬೇಕು" ಎಂದು ಸಭೆಯ ಬಳಿಕ ಹೇಳಿದರು.
"ಜನ ಬಿಜೆಪಿಯ ವಿರುದ್ಧ ಇದ್ದಾರೆ. ನಾನು ಎಲ್ಲ ರಾಜ್ಯಗಳಿಗೂ ಪ್ರವಾಸ ಮಾಡಿದ್ದೇನೆ. ಜನರ ಮೂಡ್ ನನಗೆ ಅರಿವಾಗಿದೆ. ನೋಟು ಬ್ಯಾನ್, ಜಿಎಸ್ಟಿ, ಬ್ಯಾಂಕ್ ವಂಚನೆ ತಳಮಟ್ಟದ ಜನರಿಗೂ ಹಾನಿ ಮಾಡಿವೆ. ಬಿಜೆಪಿ ಗಂಟು ಮೂಟೆ ಕಟ್ಟಿಕೊಂಡು ಹೋಗುವ ದಿನ ಬಂದಿದೆ" ಎಂದು ಬಣ್ಣಿಸಿದರು. ಈ ಮೂಲಕ 2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣೆಸಲು ಮಹಾಮೈತ್ರಿಗೆ ಚಾಲನೆ ಸಿಕ್ಕಂತಾಗಿದೆ.