"ನರೇಂದ್ರ ಮೋದಿ ದೀನ ದಲಿತರಿಗೆ ಏನೂ ಮಾಡಿಲ್ಲ" ಎಂದ ಬಿಜೆಪಿ ನಾಯಕ !
ಶಾ ಬೆನ್ನಿಗೆ ಪ್ರಹ್ಲಾದ್ ಜೋಶಿ ಎಡವಟ್ಟು
![ನರೇಂದ್ರ ಮೋದಿ ದೀನ ದಲಿತರಿಗೆ ಏನೂ ಮಾಡಿಲ್ಲ ಎಂದ ಬಿಜೆಪಿ ನಾಯಕ ! ನರೇಂದ್ರ ಮೋದಿ ದೀನ ದಲಿತರಿಗೆ ಏನೂ ಮಾಡಿಲ್ಲ ಎಂದ ಬಿಜೆಪಿ ನಾಯಕ !](https://www.varthabharati.in/sites/default/files/images/articles/2018/03/28/EDITEDJOSHI-5.jpg)
ಚಿತ್ರದುರ್ಗ, ಮಾ. 28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಸರ್ಕಾರವನ್ನು ಜರಿಯೋ ಭರದಲ್ಲಿ ಯಡಿಯೂರಪ್ಪರದ್ದು ನಂಬರ್ 1 ಭ್ರಷ್ಟ ಸರ್ಕಾರ ಎಂದು ಹೇಳಿ, ಮಂಗಳವಾರ ಮುಜುಗರಕ್ಕೀಡಾಗಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಮತ್ತೊಂದು ಯಡವಟ್ಟು ಮಾಡಿದ್ದಾರೆ.
ನಿನ್ನೆ ಸಂಜೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಬಿಜೆಪಿ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಷಣ ಮಾಡಿದ್ದು, ಅವರ ಭಾಷಣವನ್ನು ಸಂಸದ ಪ್ರಹ್ಲಾದ್ ಜೋಶಿ ಕನ್ನಡಕ್ಕೆ ತರ್ಜುಮೆ ಮಾಡಿದ್ದರು. ಆದರೆ ಅವರು ಮಾಡಿದ ಒಂದು ತರ್ಜುಮೆಯಿಂದ ಬಿಜೆಪಿ ಕೂಡ ನಗೆ ಪಾಟಲಿಗೀಡಾಗುವಂತಾಯಿತು.
ತಮ್ಮ ಭಾಷಣದ ವೇಳೆ ಅಮಿತ್ ಶಾ ಹಿಂದಿಯಲ್ಲಿ, ಸಿದ್ದರಾಮಯ್ಯ ದೀನ ದಲಿತರಿಗೆ ಏನೂ ಮಾಡಿಲ್ಲ. ಅವರಿಂದ ಯಾವುದೇ ಅಭಿವೃದ್ಧಿ ಕೆಲಸಗಳೂ ಆಗಿಲ್ಲ ಎಂದು ಹೇಳಿದ್ದು, ಅದನ್ನು ಪ್ರಹ್ಲಾದ್ ಜೋಶಿ ಕನ್ನಡಕ್ಕೆ ಭಾಷಾಂತರಿಸುವ ವೇಳೆ ಪ್ರಧಾನಿ ಮೋದಿ ಅವರು ದೀನ ದಲಿತರಿಗೆ ಏನೂ ಮಾಡಿಲ್ಲ. ಅವರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತೆ ಮುಜುಗರಕ್ಕೀಡಾಗಬೇಕಾಯಿತು.