ಪ್ರಶ್ನೆಪತ್ರಿಕೆ ಸೋರಿಕೆ: ಸಿಬಿಎಸ್ಇ 10ನೇ ತರಗತಿಯ ಗಣಿತ, 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರುಪರೀಕ್ಷೆ
ಹೊಸದಿಲ್ಲಿ,ಮಾ.28: ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರುಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯು ನಿರ್ಧರಿಸಿದೆ.
ಕೆಲವೆಡೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ವರದಿಗಳನ್ನು ಮಂಡಳಿಯು ಗಂಭೀರವಾಗಿ ಪರಿಗಣಿಸಿದೆ. ಪರೀಕ್ಷೆಗಳ ಪಾವಿತ್ರವನ್ನು ಎತ್ತಿ ಹಿಡಿಯುವ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯದ ಹಿತಾಸಕ್ತಿಯ ದೃಷ್ಟಿಯಿಂದ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರುಪರೀಕ್ಷೆಗಳನ್ನು ನಡೆಸಲು ನಿರ್ಧರಿಸ ಲಾಗಿದೆ. ಮರುಪರೀಕ್ಷೆಯ ದಿನಾಂಕಗಳು ಮತ್ತು ಇತರ ವಿವರಗಳನ್ನು ಮುಂದಿನ ವಾರ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಸಿಬಿಎಸ್ಇ ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಮಂಗಳವಾರ ರಾತ್ರಿ ಸೋರಿಕೆಯಾಗಿದ್ದು, ಅದು ಅಸಲಿ ಪ್ರಶ್ನೆಪತ್ರಿಕೆಯನ್ನು ಹೋಲುತ್ತಿದೆ. 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯು ಮಂಗಳವಾರ ನಡೆದಿದ್ದರೆ 10ನೇ ತರಗತಿಯ ಗಣಿತ ಪರೀಕ್ಷೆಯು ಬುಧವಾರ ನಡೆದಿದೆ ಎಂದು ಮೂಲಗಳು ತಿಳಿಸಿದವು.
ಇದಕ್ಕೂ ಹಿಂದಿನ ಅಧಿಕೃತ ಹೇಳಿಕೆಯಲ್ಲಿ ಸಿಬಿಎಸ್ಇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದನ್ನು ನಿರಾಕರಿಸಿತ್ತು.
ಮಂಗಳವಾರ ಅರ್ಥಶಾಸ್ತ್ರ ಪರೀಕ್ಷೆಯು ಆರಂಭಗೊಳ್ಳುವ ಕೆಲವೇ ನಿಮಿಷಗಳಿಗೆ ಮೊದಲು ಸೋರಿಕೆಯಾದ ಪ್ರಶ್ನೆಪತ್ರಿಕೆಯು ದಿಲ್ಲಿ ಶಿಕ್ಷಣ ಸಚಿವ ಮನೀಷ್ ಸಿಸೋದಿಯಾ ಅವರ ಕೈಸೇರಿದ ಬಳಿಕ ಸೋರಿಕೆಯ ವಿಷಯವು ಬೆಳಕಿಗೆ ಬಂದಿತ್ತು. ಸಿಸೋದಿಯಾ ತಕ್ಷಣವೇ ಸಿಬಿಎಸ್ಇ ಮುಖ್ಯಸ್ಥರು ಮತ್ತು ಶಿಕ್ಷಣ ಕಾರ್ಯದರ್ಶಿ ಗಳಿಗೆ ದೂರವಾಣಿ ಕರೆಗಳನ್ನು ಮಾಡಿದ್ದು, ಪರಿಶೀಲಿಸಿದಾಗ ಸೋರಿಕೆಯಾದ ಪ್ರಶ್ನೆಪತ್ರಿಕೆಯು ಅಕೌಂಟ್ಸ್ ಪತ್ರಿಕೆಯ ಸೆಟ್-2ಕ್ಕೆ ತಾಳೆಯಾಗಿತ್ತು.
ತನ್ಮಧ್ಯೆ ಸಿಬಿಎಸ್ಇ ದೂರಿನಂತೆ ದಿಲ್ಲಿ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಠಿಣ ಕ್ರಮಕ್ಕೆ ಪ್ರಧಾನಿ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರೊಂದಿಗೆ ಮಾತನಾಡಿದ್ದು, ಈ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸಿಬಿಎಸ್ಇ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರುಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದ ಬೆನ್ನಿಗೇ ಮೋದಿಯವರ ಈ ನಿರ್ದೇಶ ಹೊರಬಿದ್ದಿದೆ.
ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್ ಅವರು, ಪ್ರಶ್ನೆಪತ್ರಿಕೆಗಳ ಸೋರಿಕೆ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.
ಕೆಲವು ಸಂಘಟಿತ ಗ್ಯಾಂಗ್ಗಳು ಪರೀಕ್ಷೆಗಳಲ್ಲಿ ಇಂತಹ ಅವ್ಯವಹಾರಗಳ ಹಿಂದಿವೆ ಎಂದ ಅವರು, ತಪ್ಪಿಸತಸ್ಥರನ್ನು ಶೀಘ್ರವೇ ಗುರುತಿಸಿ ಬಂಧಿಸಲಾಗುವುದು ಎಂದರು.
ಪ್ರಶ್ನೆಪತ್ರಿಕೆಗಳ ಸೋರಿಕೆಯನ್ನು ತಡೆಯಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಸಂಪುಟವು ಸಮ್ಮತಿ ನೀಡಿದ್ದು, ಮುಂದಿನ ವರ್ಷದಿಂದ ಇದು ಜಾರಿಗೊಳ್ಳಲಿದೆ ಎಂದೂ ಜಾವಡೇಕರ್ ತಿಳಿಸಿದರು.