ರಾಜ್ಯಸಭೆಯು ಕೆಳಮನೆಯನ್ನು ನಕಲು ಮಾಡುವ ಅಗತ್ಯವಿಲ್ಲ:ಪ್ರಧಾನಿ ಮೋದಿ
ಹೊಸದಿಲ್ಲಿ,ಮಾ.28: ಸಂಸತ್ ಕಲಾಪಗಳಿಗೆ ನಿರಂತರ ಅಡೆತಡೆಗಳ ನಡುವೆಯೇ ರಾಜ್ಯಸಭೆಯಲ್ಲಿ ಕಲಾಪ ವ್ಯತ್ಯಯಗಳಗೆ ಬುಧವಾರ ವಿಷಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ನಡೆಯುತ್ತಿರುವುದನ್ನು ರಾಜ್ಯಸಭೆಯಲ್ಲಿ ಅನುಸರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಕೋರಿ ಮಾಡಿದ ಭಾಷಣದಲ್ಲಿ ಮೋದಿ, ಯಾವುದೇ ಪಕ್ಷದ ಸಿದ್ಧಾಂತದೊಂದಿಗೆ ಗುರುತಿಸಿಕೊಳ್ಳದ ಕೆಲವೇ ಸದಸ್ಯರು ಸದನದಲ್ಲಿದ್ದಾರೆ. ಇಲ್ಲಿಯ ಹೆಚ್ಚಿನ ಸದಸ್ಯರು ಸೈದ್ಧಾಂತಿಕ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಹೀಗಾಗಿ ಸದನದಲ್ಲಿ ತಮ್ಮ ಅಭಿಪ್ರಾಯಗಳ ಸ್ಥಾಪನೆಗೆ ಅವರು ಪ್ರಯತ್ನಿಸುವುದು ಸಹಜವೇ ಆಗಿದೆ. ಆದರೆ ಲೋಕಸಭೆಯಲ್ಲಿ ನಡೆಯುತ್ತಿರುವದು ಇಲ್ಲಿಯೂ(ರಾಜ್ಯಸಭೆ) ಅನುಕರಣೆಯಾಗುವ ಅಗತ್ಯವಿಲ್ಲ ಎಂದೂ ನಾವು ನಿರೀಕ್ಷೆಗಳನ್ನು ಹೊಂದಿದ್ದೇವೆ ಎಂದು ಹೇಳಿದರು.
ಹಿರಿಯ ಸದಸ್ಯರಿರುವ ಮೇಲ್ಮನೆಯು ವಿಶಿಷ್ಟ ಮಹತ್ವವನ್ನು ಹೊಂದಿದೆ ಮತ್ತು ನೀತಿ ನಿರೂಪಣೆಯಲ್ಲಿ ಮುಖ್ಯಪಾತ್ರವನ್ನು ವಹಿಸಿದೆ ಎಂದರು.
ಸದನವು ತ್ರಿವಳಿ ತಲಾಖ್ ಮಸೂದೆಯನ್ನು ಕೈಗೆತ್ತಿಕೊಂಡಾಗ ನಿವೃತ್ತ ಸದಸ್ಯರು ಚರ್ಚೆಯ ಭಾಗವಾಗಿರುವುದಿಲ್ಲ ಎನ್ನುವುದು ದುರದೃಷ್ಟಕರವಾಗಿದೆ. ಈ ಮಸೂದೆಯು ದೇಶದ ಇತಿಹಾಸದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಇಂತಹ ಮಹತ್ವದ ಚರ್ಚೆಯಲ್ಲಿ ನಿಮ್ಮದೂ ಕೊಡುಗೆಯಿದ್ದರೆ ಒಳ್ಳೆಯದಿತ್ತು ಎಂದು ಮೋದಿ ನುಡಿದರು.