ಮೈಸೂರು: ವಾಹಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಡಿಸಿ ಸೂಚನೆ
ಮೈಸೂರು,ಮಾ.28: ಪ್ರಸ್ತುತ ನಡೆಯಲಿರುವ 2018ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕಾರ್ಯಕ್ಕೆ ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಲಾಗುದರಿಂದ ಸರ್ಕಾರಿ ವಾಹನಗಳು ದುರಸ್ಥಿಯಲ್ಲಿರದಿದ್ದಲ್ಲಿ ಅದನ್ನು ದುರಸ್ಥಿ ಪಡಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ವಾಹನ ಕೋರಿಕೆಗೆ ಅಥವಾ ಆದೇಶಗಳು ಬಂದಲ್ಲಿ ವಿಳಂಬವಿಲ್ಲದೆ ಸಕಾಲದಲ್ಲಿ ವಾಹನಗಳನ್ನು ನಿರ್ದೇಶಿಸುವ ಅಧಿಕಾರಿಗಳ ಬಳಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲು ಜಿಲ್ಲಾ, ತಾಲೂಕು ಮಟ್ಟದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಮಂಡಳಿ, ನಿಗಮ ಮತ್ತು ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಕ್ರಮವಹಿಸುವುದು, ಒಪ್ಪಂದದ ಮೇರೆಗೆ ಸರ್ಕಾರಿ ಕೆಲಸಕ್ಕೆ ಪಡೆದುಕೊಂಡಿರುವ ವಾಹನಗಳು, ವಾಹನದ ನೋಂದಣಿ ಸಂಖ್ಯೆ, ವಾಹನದ ಮಾದರಿ, ಸದರಿ ವಾಹನಗಳ ವಿವರಗಳು ಸೇರಿದಂತೆ ಹಾಗೂ ಬೆಂಗಳೂರು ಮತ್ತು ಇತರೆ ಜಿಲ್ಲೆಯ ವಾಹನಗಳನ್ನು ಮೈಸೂರಿನ ವಿವಿಧ ಇಲಾಖೆಗಳಲ್ಲಿ ಬಳಸುತ್ತಿದ್ದು, ಅವುಗಳ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸದೊಂದಿಗೆ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಒಪ್ಪಂದದ ಮೇರೆಗೆ ಸರ್ಕಾರಿ ಕೆಲಸಕ್ಕೆ ಪಡೆದುಕೊಂಡಿರುವ ವಿವಿಧ ವಾಹನಗಳು ಸರ್ಕಾರಿ ವಾಹನಗಳಾಗಿರುವುದರಿಂದ ಮಾಹಿತಿಯು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಆರ್.ಟಿ.ಒ ಕಚೇರಿಯಲ್ಲಿ ಲಭ್ಯವಿಲ್ಲದಿರುವುದರಿಂದ ಅಂತಹ ವಾಹನಗಳನ್ನು ಸರ್ಕಾರಿ ಚುನಾವಣಾ ಕೆಲಸಕ್ಕೆ ಬಳಸುವುದರಿಂದ “ಕರ್ನಾಟಕ ಸರ್ಕಾರದ ಸೇವೆಯಲ್ಲಿ” ಎಂದು ವಾಹನಗಳನ್ನು ತಪಾಸಿಸಿ, ಪರಿಶೀಲಿಸಿ ವಾಹನದ ನೋಂದಣಿ ಸಂಖ್ಯೆ, ಮಾಲೀಕರ ಹೆಸರು ಮತ್ತು ಯಾವ ಇಲಾಖೆ ಕಚೇರಿಗೆ ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಇ-ಮೇಲ್ ಹಾಗೂ 2428383 ಗೆ ಕಳುಹಿಸಬೇಕು. ಚುನಾವಣಾ ಕೆಲಸ ಕಾರ್ಯಗಳಿಗೆ ಅಸಹಕಾರ ತೋರುವ, ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಆರ್.ಪಿ.ಆಕ್ಟ್ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.







