ವೀರಶೈವ-ಲಿಂಗಾಯತ ಒಂದೇ, ಭಿನ್ನಾಭಿಪ್ರಾಯ ಬೇಡ: ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡ ಪಿ. ರುದ್ರೇಶ್
ಶಿವಮೊಗ್ಗ, ಮಾ.28: ವೀರಶೈವ- ಲಿಂಗಾಯತ ಒಂದೇ. ಈ ಕುರಿತಂತೆ ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಬೇಡ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡ ಪಿ. ರುದ್ರೇಶ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವೀರಶೈವ - ಲಿಂಗಾಯತ ದೇಹ-ಪ್ರಾಣವಿದ್ದಂತೆ. ದೇಹದ ಹೊರತಾಗಿ ಪ್ರಾಣ ಹಾಗೂ ಪ್ರಾಣದ ಹೊರತಾಗಿ ದೇಹವಿರಲು ಸಾಧ್ಯವಿಲ್ಲ ಎಂಬುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ' ಎಂದು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ತಮಗೆ ತೀವ್ರ ಬೇಸರ ಉಂಟು ಮಾಡಿದೆ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ. ಇದರಿಂದ ಮತ್ತಷ್ಟು ಗೊಂದಲ ಉಂಟಾಗುತ್ತದೆಯೇ ವಿನಃ ಪರಿಸ್ಥಿತಿ ತಿಳಿಯಾಗುವುದಿಲ್ಲ. ಈ ಕಾರಣದಿಂದ ಸಮಾಜದ ಮುಖಂಡರು ಒಟ್ಟಿಗೆ ಕುಳಿತು ಸಮಾಲೋಚನೆ ನಡೆಸಬೇಕು. ಪ್ರಸ್ತುತ ಉಂಟಾಗಿರುವ ಗೊಂದಲ ತಿಳಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಸಮಾಜ ವಿಘಟನೆಯಾದರೆ ಯಾರಿಗೂ ಲಾಭವಿಲ್ಲ. ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ಏನಾದರೂ ಸಾಧನೆ ಸಾಧ್ಯ. ಪ್ರಸ್ತುತ ಉಂಟಾಗಿರುವ ಗೊಂದಲದಿಂದ ಸಮಾಜ ಬಾಂಧವರ ಮನಸ್ಸಿಗೆ ನೋವುಂಟು ಮಾಡಿದೆ. ಗೊಂದಲಕ್ಕೀಡಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಉದ್ಘಾಟನಾ ಸಮಾರಂಭ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೂತನ ಕಟ್ಟಡಕ್ಕೆ ಮಾ.31ರ ಮಧ್ಯಾಹ್ನ 12.15ಕ್ಕೆ ನವುಲೆಯ ಕುವೆಂಪುನಗರ ಜೋಡಿ ರಸ್ತೆಯ 2ನೇ ತಿರುವಿನಲ್ಲಿರುವ ನಿವೇಶನದಲ್ಲಿ ಭೂಮಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಎಸ್.ಸಜ್ಜನ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸೂಡಾದಿಂದ ಮಂಜೂರಾಗಿರುವ ಸಿಎ ನಿವೇಶನದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಕಚೇರಿ, ಗ್ರಂಥಾಲಯ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ವಿಶಾಲವಾದ ಸಭಾಂಗಣ ಮತ್ತು 5 ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದರು.
ರಂಭಾಪುರಿ ಮಠದ ಶ್ರೀ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು, ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ತೊಗರ್ಸಿಯ ಶ್ರೀ ಮಹಾಂತ ದೇಶಿಕೇಂದ್ರ ಶಿವಾ ಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂಸದ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಿ.ವೈ.ರಾಘವೇಂದ್ರ, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡಶೆಟ್ಟಿ, ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ, ಬಿ.ಕೆ.ಸಂಗಮೇಶ್ವರ್, ಮೇಯರ್ ನಾಗರಾಜ್ ಕಂಕಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ನಿರಂಜನ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎ.ಆರ್.ವೀರಭದ್ರಪ್ಪ, ಸಿ.ಎಂ.ಪಂಚಾಕ್ಷರಯ್ಯ, ಪಿ.ರುದ್ರೇಶ್, ಸಿ.ಮಹೇಶ್ ಮೂರ್ತಿ, ಸಿ.ಹೆಚ್.ಚಂದ್ರಶೇಖರಪ್ಪ, ಸಿ.ಲೋಕೇಶ್ವರ್ ಉಪಸ್ಥಿತರಿದ್ದರು.







