ನಾಗಮಂಗಲ: ಕಾಂಗ್ರೆಸ್ ಸೇರಿದ ಶಾಸಕ ಎನ್.ಚಲುವರಾಯಸ್ವಾಮಿಗೆ ಕಾರ್ಯಕರ್ತರಿಂದ ಸ್ವಾಗತ
ನಾಗಮಂಗಲ, ಮಾ.28: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡು ಬುಧವಾರ ನಾಗಮಂಗಲಕ್ಕೆ ಆಗಮಿಸಿದ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಎಪಿಎಂಸಿ ಯಾರ್ಡ್ ಬಳಿ ಸ್ವಾಗತ ಕೋರಿ ಬರಮಾಡಿಕೊಂಡರು.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಅಮಾನತಾಗಿದ್ದ ಚಲುವರಾಯಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾ.25 ರಂದು ಮೈಸೂರಿನಲ್ಲಿ ನಡೆದ ಜನಾರ್ಶೀವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಬೈಕ್ ರ್ಯಾಲಿ ರದ್ದು: ಪಟ್ಟಣದ ಪಕ್ಷದ ಕಚೇರಿವರೆಗೂ ಚಲುವರಾಯಸ್ವಾಮಿ ಅವರನ್ನು ಬೈಕ್ ರ್ಯಾಲಿ ಮೂಲಕ ಕರೆತರಲು ಪಕ್ಷದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸಜ್ಜಾಗಿದ್ದರು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ರ್ಯಾಲಿಯನ್ನು ಕೈಬಿಟ್ಟು ಹಾಗೆಯೇ ಸ್ವಾಗತಿಸಲಾಯಿತು.
ಪಟ್ಟಣಕ್ಕೆ ಆಗಮಿಸಿದ ಚಲುವರಾಯಸ್ವಾಮಿ ಟಿ.ಬಿ.ಬಡಾಣೆಯಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಕಛೇರಿಗೆ ತೆರಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಭೀಮನಹಳ್ಳಿ ಮರಿಸ್ವಾಮಿ, ತಟ್ಟಹಳ್ಳಿ ಮೂರ್ತಿ, ಕರೀಗೌಡ, ಬೆಟ್ಟದ ಮಲ್ಲೇನಹಳ್ಳಿ ರಾಮಕೃಷ್ಣ, ರವಿಕಾಂತ, ರಘು, ರಾಮು, ಇತರ ಮುಖಂಡರು ಹಾಜರಿದ್ದರು.