ಪತ್ನಿ, ಗೆಳೆಯರೊಂದಿಗೆ ಸೇರಿ ಹೆಣೆದ ನಾಟಕ: ತಪ್ಪೊಪ್ಪಿಕೊಂಡ ಆರೋಪಿ
ಅರಿಯಡ್ಕದ 'ಪೊಲೀಸ್ ವೇಷದಲ್ಲಿ ಅಪಹರಣ'ಕ್ಕೆ ಹೊಸ ತಿರುವು

ಶ್ರೀಧರ
ಪುತ್ತೂರು, ಮಾ. 29: ಪೊಲೀಸ್ ಸಮವಸ್ತ್ರದಲ್ಲಿ ಬಂದಿರುವ ಇಬ್ಬರು ತನ್ನ ಪತಿಯನ್ನು ಅಪಹರಿಸಿದ್ದಾರೆ ಎಂದು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಎಂಬಲ್ಲಿನ ನಿವಾಸಿ ಶ್ರೀಧರ ಎಂಬವರ ಪತ್ನಿ ಸೌಮ್ಯ ಪೊಲೀಸರಿಗೆ ದೂರು ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಜಮೀನು ವಿಚಾರದಲ್ಲಿ ಬಾವಂದಿರನ್ನು ಸಿಲುಕಿಸಲು ತಾನು, ಪತ್ನಿ ಹಾಗೂ ಗೆಳೆಯರ ಜೊತೆಗೆ ಸೇರಿಕೊಂಡು ಹೆಣೆದ ನಾಟಕವಿದು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಮಾ. 26ರಂದು ರಾತ್ರಿ ಸುಮಾರು 10 ಗಂಟೆಗೆ ಮನೆಗೆ ಬಂದ ಇಬ್ಬರು ಪೊಲೀಸ್ ವೇಷದಲ್ಲಿದ್ದವರು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದು ನೋಡಿದಾಗ ಪೊಲೀಸ್ ವೇಷದಲ್ಲಿದ್ದವರು ''ನಾವು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿದ್ದೇವೆ , ನಿಮ್ಮ ಗಂಡನ ಮೇಲೆ ಕೇಸು ಇದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ'' ಎಂದು ಶ್ರೀಧರ್ ಪತ್ನಿ ಸೌಮ್ಯ ಸಂಪ್ಯ ಠಾಣೆಗೆ ಮಾ. 27ರಂದು ದೂರು ನೀಡಿದ್ದರು.
ಘಟನೆಯ ಕುರಿತು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಅಪಹರಣಕ್ಕೊಳಗಾಗಿದ್ದ ಶ್ರೀಧರ್ ಮಾ.28ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಅರಿತ ಪೊಲೀಸರು ಆತನನ್ನು ಕರೆತಂದು ವಿಚಾರಣೆಗೊಳಪಡಿಸಿದ್ದರು.
ಪೊಲೀಸರ ವಿಚಾರಣೆ ವೇಳೆ ಶ್ರೀಧರ್ ''ಪೊಲೀಸ್ ವೇಷದಲ್ಲಿ ಬಂದು ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನಗೆ ಮತ್ತು ನನ್ನ ಅಕ್ಕ ಹಾಗೂ ತಂಗಿಯ ಗಂಡಂದಿರಿಗೆ ಜಮೀನಿನ ವಿಚಾರದಲ್ಲಿ ತಕರಾರು ಇದೆ. ಅವರ ಮೇಲೆ ಕೇಸು ದಾಖಲಿಸಿ ಅವರನ್ನು ಇಲ್ಲಿಂದ ಅಟ್ಟಬೇಕು ಎಂಬ ಉದ್ದೇಶದಿಂದ ನಾನು ಮತ್ತು ಸ್ನೇಹಿತರಾದ ಉಮೇಶ್ ಮತ್ತು ಸೀತಾರಾಮ ಹಾಗೂ ನನ್ನ ಪತ್ನಿ ಸೌಮ್ಯ ಸೇರಿ ಹಣೆದ ನಾಟಕವಾಗಿದೆ. ಮಾ.26ರಂದು ರಾತ್ರಿ ನಾನು ಮನೆಯಿಂದ ಹೋಗಿ ಉಮೇಶನ ಮನೆಯಲ್ಲಿ ಮಲಗಿದ್ದೆ. ಬೆಳಗ್ಗೆ ನಾನು ಉಮೇಶನ ಜೊತೆ ನಡೆದುಕೊಂಡೇ ದರ್ಬೆತ್ತಡ್ಕ ಮಾರ್ಗವಾಗಿ ಉಪ್ಪಳಿಗೆಗೆ ತೆರಳಿದ್ದೆ. ಅಲ್ಲಿಂದ ಸೀತಾರಾಮ ಮತ್ತು ನಾನು ಜೊತೆಯಾಗಿ ಪುತ್ತೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದೆವು. ಬಳಿಕ ಸೀತಾರಾಮ ನನ್ನನ್ನು ಬಿಟ್ಟು ತೆರಳಿದ್ದಾರೆ. ಬಳಿಕ ನಾನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ದೂರು ನೀಡಲು ತೀರ್ಮಾನಿಸಿದ್ದೆ. ನನಗೆ ಯಾರೂ ಹಲ್ಲೆ ಮಾಡಿಲ್ಲ, ಅಪಹರಣವೂ ಮಾಡಿಲ್ಲ ಎಂದು ತಿಳಿಸಿದ್ದಾನೆ.
ಪೊಲೀಸರು ಶ್ರೀಧರ್ ಹೇಳಿಕೆಯನ್ನು ಪಡೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







