ಮಡಿಕೇರಿ: ವನ್ಯಜೀವಿ ಬೇಟೆಯಾಡುತ್ತಿದ್ದ ಆರು ಮಂದಿಯ ಬಂಧನ
![ಮಡಿಕೇರಿ: ವನ್ಯಜೀವಿ ಬೇಟೆಯಾಡುತ್ತಿದ್ದ ಆರು ಮಂದಿಯ ಬಂಧನ ಮಡಿಕೇರಿ: ವನ್ಯಜೀವಿ ಬೇಟೆಯಾಡುತ್ತಿದ್ದ ಆರು ಮಂದಿಯ ಬಂಧನ](https://www.varthabharati.in/sites/default/files/images/articles/2018/03/29/Z CRIME 1.jpg)
ಮಡಿಕೇರಿ, ಮಾ.29: ಪುಷ್ಪಗಿರಿ ವನ್ಯಧಾಮದಲ್ಲಿ ಕಡವೆ ಹಾಗು ಇತರ ಅಪರೂಪದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯದಲ್ಲೇ ಬಂಧಿಸಿದ್ದಾರೆ.
ತಾಲೂಕಿನ ಕುಂಬಾರಗಡಿಗೆ, ಗ್ರಾಮದ ಟಿ.ಪಿ.ಮುದ್ದಯ್ಯ, ಸೋಮಯ್ಯ, ಗಣೇಶ, ಲೋಕೇಶ್, ಮುಟ್ಲು ಗ್ರಾಮದ ವಿ.ಕೆ. ಮನು, ಕಾಶಿ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ ಕಡವೆ, ಮುಳ್ಳುಹಂದಿ, ಮಂಗ ಸೇರಿದಂತೆ 40 ಕೆ.ಜಿ.ಮಾಂಸ, ಒಂಟಿ ನಳಿಕೆಯ 3 ಕೋವಿಗಳು, 6 ಮೊಬೈಲ್ ಪೋನ್ಗಳು, 9 ಕತ್ತಿ ಗಳನ್ನು ವಶಪಡಿಸಿಕೊಂಡಿದ್ದಾರೆ.
ವನ್ಯಧಾಮದ ಭಕ್ತಿಬೆಟ್ಟದಲ್ಲಿ ಗುರುವಾರ ಬೇಟೆಯಾಡುತ್ತಿದ್ದ ಸಂದರ್ಭ ಪುಷ್ಪಗಿರಿ ವನ್ಯಧಾಮದ ಆರ್ಎಫ್ಒ ಶ್ರೀನಿವಾಸನಾಯಕ್ ಸೋಮವಾರಪೇಟೆ ಆರ್ಎಫ್ಒ ಲಕ್ಷ್ಮೀಕಾಂತ್, ಡಿಆರ್ಎಫ್ಒ ದುಶ್ಯಂತ್ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮಬೇಟೆ ಹಾಗು ಶಸ್ತ್ರಾಸ್ತ್ರ ಕಾಯಿದೆಯಡಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.